Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಕನ್ಯಾಕುಮಾರಿಯಲ್ಲಿ ಬೆಂಗಳೂರಿನ ಇಬ್ಬರು ಪ್ರವಾಸಿಗರು ಸಾವು….!

ಕನ್ಯಾಕುಮಾರಿ( ತಮಿಳುನಾಡು) : ವಾರಾಂತ್ಯ ಹಿನ್ನೆಲೆ ಪ್ರವಾಸಕ್ಕಾಗಿ ಕನ್ಯಾಕುಮಾರಿಗೆ ಆಗಮಿಸಿದ್ದ ಬೆಂಗಳೂರಿನ ಪ್ರವಾಸಿಗರಲ್ಲಿ ಮೂವರು ಸಮುದ್ರಪಾಲಾಗಿ, ಇಬ್ಬರು ಸಾವನ್ನಪ್ಪಿರುವ ಘಟನೆ ಭಾನುವಾರ ನಡೆದಿದೆ.

ಮೃತರನ್ನು ಬೆಂಗಳೂರಿನ ಖಾಸಗಿ ಕಂಪನಿ ಉದ್ಯೋಗಿಗಳಾದ ಮಣಿ (30), ಸುರೇಶ್​(30) ಎಂದು ಗುರುತಿಸಲಾಗಿದೆ. ನೀರು ಪಾಲಾಗಿದ್ದ ಬಿಂದು ಅವರನ್ನು ಭದ್ರತಾ ಪಡೆಗಳ ಸಿಬ್ಬಂದಿ ರಕ್ಷಣೆ ಮಾಡಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅವರಿಗೆ ಚಿಕಿತ್ಸೆ ಮುಂದುವರಿದಿದೆ.

ಸೆಪ್ಟೆಂಬರ್​ 2ರಂದು ಬೆಂಗಳೂರಿನಿಂದ 10 ಜನ ಪ್ರವಾಸಿಗರು ಕನ್ಯಾಕುಮಾರಿಗೆ ಬಂದಿದ್ದರು. ಈ ಎಲ್ಲರೂ ಬೆಂಗಳೂರಿನ ಖಾಸಗಿ ಕಂಪನಿಯ ಉದ್ಯೋಗಿಗಳಾಗಿದ್ದಾರೆ. ಶನಿವಾರ ಕನ್ಯಾಕುಮಾರಿಯಲ್ಲಿನ ಹೋಟೆಲ್​ ಒಂದರಲ್ಲಿ ಎಲ್ಲರೂ ತಂಗಿದ್ದರು. ಬಳಿಕ ಭಾನುವಾರ ಇಲ್ಲಿನ ಕೋವಲಂ ಬೀಚ್​ನ್ನು ನೋಡಲು ಬಂದಿದ್ದಾರೆ. ನಂತರ ಎಲ್ಲರೂ ಸಮುದ್ರಕ್ಕೆ ಇಳಿದು ಎಂಜಾಯ್​ ಮಾಡುತ್ತಿದ್ದರು. ಈ ಸಂದರ್ಭ ಗುಂಪಿನಲ್ಲಿದ್ದ ಮಣಿ, ಸುರೇಶ್​​, ಬಿಂದು ಆಳ ಜಾಸ್ತಿ ಇರುವ ಕಡೆಗೆ ತೆರಳಿದ್ದಾರೆ. ಈ ವೇಳೆ ಬೃಹತ್​ ಅಲೆಗಳಿಗೆ ಸಿಲುಕಿ ಮೂವರು ಕೊಚ್ಚಿಹೋಗಿದ್ದಾರೆ.

ಈ ವೇಳೆ ಜೊತೆಗಿದ್ದವರು ನೀರಿನಲ್ಲಿ ಕೊಚ್ಚಿ ಹೋಗುತ್ತಿರುವವರನ್ನು ರಕ್ಷಣೆ ಮಾಡುವಂತೆ ಬೊಬ್ಬೆ ಹಾಕಿದ್ದಾರೆ. ಈ ಸಂದರ್ಭ ತಕ್ಷಣ ಎಚ್ಚೆತ್ತ ಕೋಸ್ಟ್​ ಗಾರ್ಡ್​ ಸಿಬ್ಬಂದಿಗಳು ಪ್ರವಾಸಿಗರ ರಕ್ಷಣೆಗೆ ಮುಂದಾಗಿದ್ದಾರೆ. ಆದರೆ ಅದಾಗಲೇ ಸುರೇಶ್​ ಮತ್ತು ಮಣಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದರು. ಬಿಂದು ಅವರನ್ನು ರಕ್ಷಿಸಿದ ಭದ್ರತಾ ಸಿಬ್ಬಂದಿ ಕೂಡಲೇ ಕನ್ಯಾಕುಮಾರಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.

ಘಟನೆ ಬಗ್ಗೆ ಮಾಹಿತಿ ನೀಡಿದ ಕನ್ಯಾಕುಮಾರಿ ಪೊಲೀಸರು, ಇನ್​ಸ್ಪೆಕ್ಟರ್​ ನವೀನ್​ ನೇತೃತ್ವದಲ್ಲಿ ಪ್ರವಾಸಿಗರ ರಕ್ಷಣಾ ಕಾರ್ಯಾಚರಣೆ ನಡೆಸಲಾಯಿತು. ದುರದೃಷ್ಟವಶಾತ್​ ಇಬ್ಬರು ಪ್ರವಾಸಿಗರು ಸಾವನ್ನಪ್ಪಿದ್ದು, ಒಬ್ಬರನ್ನು ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.