Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಚೈತ್ರಾ ಗ್ಯಾಂಗ್ ಶುದ್ಧ ವಂಚಕರು, ಯಾವುದೇ ರಾಜಕೀಯ ಹಸ್ತಕ್ಷೇಪ ಇಲ್ಲ – ದೊಡ್ಡವರ ಹೆಸರು ಹೊರಬರುತ್ತೆಂದು ಬೊಗಳೆ ಬಿಟ್ಟ ಚೈತ್ರಾ ಕುಂದಾಪುರ : ಕಮೀಷನರ್ ಹೇಳಿಕೆ

ಬಿಜೆಪಿ ಟಿಕೆಟ್‌ ಕೊಡಿಸುವುದಾಗಿ ಏಳು ಕೋಟಿ ರೂ. ಹಣ ಪಡೆದು ಉದ್ಯಮಿ ಗೋವಿಂದ ಬಾಬು ಪೂಜಾರಿ ( Govinda Babu Poojary) ಅವರಿಗೆ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ನಗರ ಕಮೀಷನರ್ ಬಿ‌. ದಯಾನಂದ್ (Police commissioner B Dayanand) ಪ್ರತಿಕ್ರಿಯೆ ನೀಡಿದ್ದು, ಚೈತ್ರಾ ಗ್ಯಾಂಗ್ (Chaithra Kundapura) ನಿಂದ ಇದೊಂದು ನೇರಾನೇರಾ ವಂಚನೆ ಪ್ರಕರಣವಾಗಿದ್ದು, ಇದರಲ್ಲಿ ಯಾವುದೇ ರಾಜಕೀಯ ಇಲ್ಲ ಎಂದು ಹೇಳಿದ್ದಾರೆ.

ಇತ್ತೀಚೆಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಚೈತ್ರಾ ಕುಂದಾಪುರ ಮತ್ತವಳ ತಂಡವನ್ನು ಸಿಸಿಬಿ ಬಂಧಿಸಿತ್ತು. ಸಿಸಿಬಿ ಕಚೇರಿಯೆದುರು ಮಾಧ್ಯಮಗಳೊಡನೆ ಗುರುವಾರ ಪ್ರತಿಕ್ರಿಯೆ ನೀಡಿದ್ದ ಚೈತ್ರಾ, ಪ್ರಕರಣದಲ್ಲಿ ದೊಡ್ಡದೊಡ್ಡವರ ಹೆಸರೆಲ್ಲಾ ಹೊರಬರಲಿದೆ ಎಂದು ಬಾಂಬ್‌ ಸಿಡಿಸಿದ್ದಳು. ಆದರೆ ಇದೆಲ್ಲಾ ಸುಳ್ಳು, ಇದರಲ್ಲಿ ಯಾವುದೇ ಹುರುಳಿಲ್ಲ ಎಂದು ಕಮೀಷನರ್ ಸ್ಪಷ್ಟನೆ ನೀಡಿದ್ದಾರೆ.

ಇಂದು ಮಧ್ಯಾಹ್ನ ಮಾಧ್ಯಮಗಳೊಂದಿಗೆ ಪ್ರತಿಕ್ರಿಯಿಸಿದ ಅವರು, ಪ್ರಕರಣದಲ್ಲಿ ಒಟ್ಟು ಏಳು ಜನರನ್ನು ಬಂಧಿಸಲಾಗಿದೆ. ಸಿಸಿಬಿ ಅಧಿಕಾರಿಗಳ ತಂಡ ವಂಚಕರನ್ನು ಬಂಧನಕ್ಕೊಳಪಡಿಸಿದ್ದು, ಪ್ರಕರಣದಲ್ಲಿ ಶಾಮೀಲಾದ ಎಲ್ಲರನ್ನೂ ಸೆರೆಹಿಡಿಯಲಾಗುವುದು ಎಂದರು.

ಹಣ ಮರುವಸೂಲಿ ಬಗ್ಗೆ ನಂತರ ತನಿಖೆ ನಡೆಯಲಿದ್ದು, ಸದ್ಯಕ್ಕೆ ಸಿಸಿಬಿ ವಿಚಾರಣೆ ನಡೆಸುತ್ತಿದೆ‌‌. ಪ್ರಕರಣದಲ್ಲಿ ಯಾವುದೇ ರಾಜಕೀಯ ಹಸ್ತಕ್ಷೇಪ ಇಲ್ಲ. ಸಂಪೂರ್ಣ ತನಿಖೆಯ ಬಳಿಕ ಪ್ರಕರಣದ ಬಗ್ಗೆ ವಿವರಣೆ ನೀಡಲಾಗುವುದು ಎಂದವರು ಹೇಳಿಕೆ ನೀಡಿದ್ದಾರೆ‌.