Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ತರಗತಿಗೆ ನುಗ್ಗಿ ಶಿಕ್ಷಕಿಯಾಗಿದ್ದ ಪತ್ನಿಗೆ ತಲಾಖ್ ನೀಡಿದ್ದ ಪತಿ – ಪ್ರಕರಣ ದಾಖಲು

ಬಾರಾಬಂಕಿ:ಖಾಸಗಿ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದ ಮಹಿಳೆಯ ಪತಿಯೊಬ್ಬ ವಿದ್ಯಾರ್ಥಿನಿಯರ ಸಮ್ಮುಖದಲ್ಲಿಯೇ ತ್ರಿವಳಿ ತಲಾಖ್ ನೀಡಿರುವ ಘಟನೆ ಉತ್ತರ ಪ್ರದೇಶದ ಬಾರಾಬಂಕಿ ಜಿಲ್ಲೆಯಲ್ಲಿ ನಡೆದಿದೆ.

ಮಹಿಳೆ ತರಗತಿ ತೆಗೆದುಕೊಳ್ಳುತ್ತಿದ್ದಾಗ ಈ ಘಟನೆ ನಡೆದಿದ್ದು ಆರೋಪಿ ಪತಿ ಮೊಹಮ್ಮದ್ ಶಕೀಲ್ ಎಂಬಾತನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮೂರು ವರ್ಷಗಳ ಹಿಂದೆ ಇವರಿಬ್ಬರ ವಿವಾಹ ನಡೆದಿದ್ದು, ಪತಿ ತನಗೆ ತಿಳಿಸದೆ ಸೌದಿ ಅರೇಬಿಯಾಗೆ ತೆರಳಿದ್ದು, ಪತಿ ಸಹಿತ ಅತ್ತೆ ಮನೆಯವರು ವರದಕ್ಷಿಣೆಗಾಗಿ ಪೀಡಿಸುತ್ತಿದ್ದರು ಎಂದು ಮಹಿಳೆ ತನ್ನ ದೂರಿನಲ್ಲಿ ಆರೋಪಿಸಿದ್ದಾರೆ. ವರದಕ್ಷಿಣೆ ತರದಿದ್ದರೆ ಮನೆಯಿಂದ ಹೊರಹಾಕುವುದಾಗಿ ಬೆದರಿಸುತ್ತಿದ್ದು, ಕೊನೆಗೆ ತಾಯಿಯ ಮನೆಗೆ ಕಳುಹಿಸಿದ್ದು, ಅಂದಿನಿಂದ ತಾನು ತನ್ನ ತಾಯಿಯ ಮನೆಯಲ್ಲಿ ವಾಸಿಸುತ್ತಿದ್ದೇನೆ ಮತ್ತು ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದೆ ಎಂದು ಮಹಿಳೆ ದೂರಿನಲ್ಲಿ ಹೇಳಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಶಿಕ್ಷಕಿಯ ಪತಿ ಸೌದಿ ಅರೇಬಿಯಾದಿಂದ ಹಿಂದಿರುಗಿದ್ದು ಬಾರಾಬಂಕಿಯಲ್ಲಿರುವ ಆಕೆಯ ತಾಯಿಯ ಮನೆಗೆ ಬಂದು ತನ್ನೊಂದಿಗೆ ಮನೆಗೆ ಹಿಂದಿರುಗುವಂತೆ ಹೇಳಿದ್ದು, ತಕ್ಷಣ ಹಿಂತಿರುಗಲು ಸಾಧ್ಯವಿಲ್ಲ ಎಂದಾಗ ಏಕಾಏಕಿ ಶಾಲೆಗೆ ಬಂದು
ತಲಾಖ್ ನೀಡಿದ್ದಾನೆ ಎನ್ನಲಾಗಿದೆ.

ತ್ರಿವಳಿ ತಲಾಖ್ ಪದ್ಧತಿಯನ್ನು 2019 ರಲ್ಲಿ ದೇಶದಲ್ಲಿ ಕಾನೂನುಬಾಹಿರ ಮತ್ತು ಅಸಂವಿಧಾನಿಕ ಎಂದು ಘೋಷಿಸಲಾಗಿದೆ