Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಪತ್ನಿ, ಸೋದರಳಿಯನಿಗೆ ಗುಂಡಿಕ್ಕಿ ಆತ್ಮಹತ್ಯೆಗೆ ಶರಣಾದ ಎಸಿಪಿ

ಮಹಾರಾಷ್ಟ್ರ:ಹಿರಿಯ ಪೊಲೀಸ್ ಅಧಿಕಾರಿ ತನ್ನ ಪತ್ನಿ ಮತ್ತು ಸೋದರಳಿಯನನ್ನು ತನ್ನ ರಿವಾಲ್ವರ್‌ನಿಂದ ಗುಂಡಿಕ್ಕಿ ಬಳಿಕ ತಾನೂ ಹಣೆಗೆ ಗುಂಡು ಹೊಡೆದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ.

ಮೃತರನ್ನು ಎಸಿಪಿ ಭರತ್ ಗಾಯಕ್ವಾಡ್, ಅವರ ಪತ್ನಿ ಮೋನಿ ಗಾಯಕ್ವಾಡ್ (44) ಮತ್ತು ಸೋದರಳಿಯ ದೀಪಕ್ (35) ಎಂದು ಗುರುತಿಸಲಾಗಿದೆ.ಬಾನೇರ್ ಪ್ರದೇಶದ ಅವರ ಬಂಗಲೆಯಲ್ಲಿ ಬೆಳಗಿನ ಜಾವ 3.30ರ ಸುಮಾರಿಗೆ ಈ ಘಟನೆ ಬೆಳಕಿಗೆ ಬಂದಿದೆ. ಈ ಘಟನೆಯ ಹಿಂದಿರುವ ಕಾರಣ ತಿಳಿದುಬಂದಿಲ್ಲ ಎಂದು ಚತುರ್ಶೃಂಗಿ ಪೊಲೀಸ್ ಠಾಣೆಯ ಅಧಿಕಾರಿ ತಿಳಿಸಿದ್ದಾರೆ.

ಗಾಯಕ್ವಾಡ್ ಅವರನ್ನು ಅಮರಾವತಿಯಲ್ಲಿ ಎಸಿಪಿಯಾಗಿ ನಿಯೋಜಿಸಲಾಗಿತ್ತು. ಅವರಿಗೆ ಇಬ್ಬರು ಮಕ್ಕಳಿದ್ದು, ಪತ್ನಿ ಮತ್ತು ಸೋದರಳಿಯನೊಂದಿಗೆ ಪುಣೆಯ ಬನೇರ್‌ನಲ್ಲಿ ನೆಲೆಸಿದ್ದರು ಎನ್ನಲಾಗಿದೆ. ಸೋಮವಾರ ಬೆಳಗಿನ ಜಾವ ಎಸಿಪಿ, ಪತ್ನಿಯ ತಲೆಗೆ ಗುಂಡು ಹಾರಿಸಿದ್ದಾರೆ. ಗುಂಡಿನ ಸದ್ದು ಕೇಳಿ ಅವರ ಮಗ ಮತ್ತು ಸೋದರಳಿಯ ಓಡಿ ಬಂದು ಬಾಗಿಲು ತೆರೆದಿದ್ದಾರೆ  ಅವರು ಬಾಗಿಲು ತೆರೆದ ಕೂಡಲೆ ಸೋದರಳಿಯನ ಮೇಲೆ ಗುಂಡು ಹಾರಿಸಿ ಬಳಿಕ ತಾನು ಗುಂಡು ಹಾರಿಸಿಕೊಂಡಿದ್ದಾರೆ ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ. ಈ ಘಟನೆಯ ಕುರಿತು ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.