Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಫೇಸ್‌ಬುಕ್‌ ಗೆಳೆಯನನ್ನು ಮದುವೆಯಾಗಲು ಶ್ರೀಲಂಕಾದಿಂದ ಆಂಧ್ರಕ್ಕೆ ಬಂದ ಯುವತಿ

ಆಂಧ್ರ ಪ್ರದೇಶ: ಪಾಕಿಸ್ತಾನದ ಸೀಮಾ ಹೈದರ್‌, ಭಾರತದ ಅಂಜು ಪ್ರೇಮ ಕಥೆ ನಡುವೆ ಇದೀಗ ಶ್ರೀಲಂಕಾ ಮೂಲದ 25 ವರ್ಷದ ಯುವತಿಯೊಬ್ಬಳು ಫೇಸ್‌ಬುಕ್‌ ಗೆಳೆಯನನ್ನು ಮದುವೆಯಾಗಲು ಆಂಧ್ರ ಪ್ರದೇಶಕ್ಕೆ ಬಂದಿದ್ದಾಳೆ.

ವಿಕನೇಶ್ವರಿ ಶಿವಕುಮಾರ ಮತ್ತು ಆಂಧ್ರ ಪ್ರದೇಶದ ಲಕ್ಷ್ಮಣ್‌(28 ) ಎನ್ನುವ ಯುವಕನಿಗೆ 2017 ರಲ್ಲಿ ಫೇಸ್‌ ಬುಕ್‌ ಮೂಲಕ ಪರಿಚಯವಾಗಿ ಸ್ನೇಹಿತರಾದ ಇವರು, ಆ ಬಳಿಕ ಆತ್ಮೀಯರಾದರು. ಇವರ ಆತ್ಮೀಯತೆ ಪ್ರೀತಿಗೆ ತಿರುಗಿತು. ಪರಸ್ಪರ ಪ್ರೀತಿಸುತ್ತಿದ್ದ ಇವರು ಮದುವೆಯಾಗುವ ನಿರ್ಧಾರಕ್ಕೆ ಬಂದಿದ್ದಾರೆ.

ಇನ್ನು ಯುವತಿಯು ಶ್ರೀಲಂಕಾದಿಂದ ಆಂಧ್ರಕ್ಕೆ ಪ್ರವಾಸಿ ವೀಸಾದೊಂದಿಗೆ ಬಂದಿದ್ದು, ಇಬ್ಬರ ನಡುವಿನ ಪ್ರೀತಿಯ ವಿಚಾರ ಲಕ್ಷ್ಮಣ್‌ ಅವರ ಕುಟುಂಬಕ್ಕೆ ಮೊದಲೇ ತಿಳಿದಿತ್ತು. ಲಕ್ಷ್ಮಣ್‌ ಅವರ ಕುಟುಂಬದವರ ಸಮ್ಮುಖದಲ್ಲಿ ದೇವಸ್ಥಾನವೊಂದರಲ್ಲಿ ಇಬ್ಬರು ಮದುವೆಯಾಗಿದ್ದಾರೆ.

ಆಗಸ್ಟ್ 6 ರಂದು ವಿಕನೇಶ್ವರಿ ಅವರ ವೀಸಾ ಅವಧಿ ಮುಕ್ತಾಯಗೊಳ್ಳಲಿದ್ದು, ವಲಸೆ ನಿಯಮದ ಅನುಸಾರವಾಗಿ ಚಿತ್ತೂರು ಜಿಲ್ಲಾ ಪೊಲೀಸರು ವಿಕನೇಶ್ವರಿಗೆ ನೋಟಿಸ್ ನೀಡಿದ್ದಾರೆ.

ಇನ್ನು ವಿಕನೇಶ್ವರಿ ಅವರು ಭಾರತೀಯ ಪೌರತ್ವವನ್ನು ಪಡೆಯಲು ಬಯಸಿದ್ದು, ಅವರ ವೀಸಾ ಅವಧಿ ವಿಸ್ತಾರಿಸುವ ಸಾಧ್ಯತೆಯಿದೆ ಎಂದು ವರದಿ ತಿಳಿಸಿದೆ.