Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಬಸ್ಸಿಗಾಗಿ ಕಾಯುತ್ತಿದ್ದ ವಿದ್ಯಾರ್ಥಿನಿಯರ ಮೇಲೆ ಹರಿದ ಬಸ್- ಒಬ್ಬಳು ಮೃತ್ಯು, ಇನ್ನೊಬ್ಬಳ ಸ್ಥಿತಿ ಗಂಭೀರ

ಮೂಡಿಗೆರೆ: ಬೆಳಿಗ್ಗೆ ಶಾಲೆಗೆ ತೆರಳಲು ಬಸ್ಸಿಗಾಗಿ ಕಾಯುತ್ತಿದ್ದ ವಿದ್ಯಾರ್ಥಿಗಳ ಮೇಲೆ ಖಾಸಗಿ ಬಸ್ಸೊಂದು ಹರಿದ ಪರಿಣಾಮ ಗಂಭೀರ ಗಾಯಗೊಂಡಿದ್ದ ಇಬ್ಬರು ವಿದ್ಯಾರ್ಥಿನಿಯರ ಪೈಕಿ ಒಬ್ಬಳು ಸಾವನ್ನಪ್ಪಿದ್ದ ಘಟನೆ ತರೀಕೆರೆ ತಾಲೂಕಿನ ಕಾವಲ್ ದುಗ್ಲಾಪುರ ಗೇಟ್ ನಲ್ಲಿ ಸಂಭವಿಸಿದೆ.

8ನೇ ತರಗತಿಯಲ್ಲಿ ವ್ಯಾಸಾಂಗ ಮಾಡುತ್ತಿದ್ದ ತುಳಸಿ (14) ಮೃತ ವಿದ್ಯಾರ್ಥಿನಿ. ಇನ್ನೊಬ್ಬಳ ಸ್ಥಿತಿ ಗಂಭೀರವಾಗಿದೆ. ಘಟನೆಯಲ್ಲಿ ನಾಲ್ವರು ವಿದ್ಯಾರ್ಥಿಗಳು ಗಂಭೀರವಾಗಿ ಗಾಯಗೊಂಡಿದ್ದಾರೆ. ಚಾಲಕನ ವೇಗದ ಚಾಲನೆಯೇ ದುರ್ಘಟನೆಗೆ ಕಾರಣ ಎಂದು ಆರೋಪಿಸಲಾಗಿದೆ

ಕಾವಲ್ ದುಗ್ಲಾಪುರ ಗೇಟ್ ಬಳಿ ಬೆಳಿಗ್ಗೆ ಶಾಲೆಗೆ ತೆರಳಲು ಬಸ್ಸಿಗಾಗಿ ವಿದ್ಯಾರ್ಥಿಗಳು ಸೇರಿದಂತೆ ಕೆಲವು ಮಂದಿ ರಸ್ತೆ ಬದಿ ಕಾಯುತ್ತಿದ್ದರು ಈ ವೇಳೆ ಅತೀ ವೇಗವಾಗಿ ಬಂದ ಖಾಸಗಿ ಬಸ್ಸೊಂದು ರಸ್ತೆ ಬದಿ ನಿಂತಿದ್ದ ವಿದ್ಯಾರ್ಥಿಗಳಿಗೆ ಡಿಕ್ಕಿ ಹೊಡೆದಿದೆ  5 ಮಂದಿ ಕೂದಲೆಳೆಯ ಅಂತರದಲ್ಲಿ ಪಾರಾಗಿದ್ದಾರೆ,

ಅತಿವೇಗವಾಗಿ ಬರುತ್ತಿದ್ದ ಬಸ್ಸು ನಿಯಂತ್ರಣ ಕಳೆದು ವಿದ್ಯಾರ್ಥಿಗಳಿಗೆ ಡಿಕ್ಕಿ ಹೊಡೆದು ಮುಂದೆ ಸಾಗಿ ರಸ್ತೆ ಬದಿಯ ಬಸ್ ನಿಲ್ದಾಣ, ಮನೆಗಳತ್ತ ನುಗ್ಗಿದೆ, ಡಿಕ್ಕಿ ರಬಸಕ್ಕೆ ಮನೆಯ ಮುಂಭಾಗದ ಛಾವಣಿ ಸಂಪೂರ್ಣ ಜಖಂಗೊಂಡಿದೆ

ಗಂಭೀರ ಗಾಯಗೊಂಡ ವಿದ್ಯಾರ್ಥಿನಿಯರನ್ನು ತುರ್ತು ಚಿಕಿತ್ಸೆಗಾಗಿ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ರವಾನೆ ಮಾಡಲಾಗಿತ್ತು. ಆದರೆ ಅಸ್ಪತ್ರೆಗೆ ತಲುಪುವ  ಮೊದಲೇ ಒಬ್ಬಳು ವಿದ್ಯಾರ್ಥಿನಿ ಪ್ರಾಣ ಬಿಟ್ಟಿದ್ದಾಳೆ.

ಖಾಸಗಿ ಬಸ್ ಗಳು ಅತಿ ವೇಗದಿಂದ ಚಲಾಯಿಸುತ್ತಾರೆ ಇದರಿಂದ ಅನಾಹುತಗಳು ಸಂಭವಿಸುತ್ತಿದ್ದು ಖಾಸಗಿ ಬಸ್ಗಳ ವೇಗಕ್ಕೆ ಕಡಿವಾಣ ಹಾಕಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ. ಘಟನೆ ಸಂಬಂಧ ತರೀಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ .