Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ ಉದಯನಿಧಿ ಸ್ಟಾಲಿನ್ – ಈ ಬಾರಿ ಬಿಜೆಪಿ ಬಗ್ಗೆ ನಾಲಗೆ ಹರಿಬಿಟ್ಟ ಶಾಸಕ ಹೇಳಿದ್ದೇನು?

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರ ಪುತ್ರ ಹಾಗೂ ತಮಿಳುನಾಡಿನ ಕ್ರೀಡಾ ಹಾಗೂ ಯುವಜನ ವ್ಯವಹಾರಗಳ ಸಚಿವ ಉದಯನಿಧಿ ಸ್ಟಾಲಿನ್ ಅವರು ಈಗ ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಸನಾತನ ಧರ್ಮದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದ ಅವರು ಈಗ ಬಿಜೆಪಿಯನ್ನು ವಿಷಕಾರಿ ಹಾವಿಗೆ ಹೋಲಿಸಿದ್ದಾರೆ.

ಇತ್ತೀಚೆಗೆ ಅವರು ಸನಾತನ ಧರ್ಮವನ್ನು ನಿರ್ಮೂಲನೆ ಮಾಡಬೇಕು ಎಂದು ಹೇಳಿದ್ದು ಇದಕ್ಕೆ ದೇಶಾದ್ಯಂತ ಆಕ್ರೋಶ ವ್ಯಕ್ತವಾಗಿದೆ.

ಲೋಕಸಭಾ ಸಂಸದ ಮತ್ತು ಡಿಎಂಕೆ ಉಪ ಪ್ರಧಾನ ಕಾರ್ಯದರ್ಶಿ ಎ. ರಾಜಾ ಅವರು ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಹಾವಿಗೆ ಹೋಲಿಸಿದ್ದರು. ಇದೀಗ ಉದಯನಿಧಿ ಸ್ಟಾಲಿನ್ ಅವರು ಬಿಜೆಪಿಯನ್ನು ಹಾವಿಗೆ ಹೋಲಿಸಿದ್ದು, ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಅವರು ಸೊಳ್ಳೆ ಬತ್ತಿಯ ಚಿತ್ರವನ್ನು ಪೋಸ್ಟ್ ಮಾಡಿದ್ದಾರೆ.

ತಮಿಳುನಾಡಿನ ನೇವೇಲಿಯಲ್ಲಿ ನಡೆದ ಡಿಎಂಕೆ ಶಾಸಕ ಸಭಾ ರಾಜೇಂದ್ರ ಅವರ ವಿವಾಹ ಸಮಾರಂಭದಲ್ಲಿ ಭಾಗಿಯಾಗಿದ್ದ ಉದಯನಿಧಿ ಸ್ಟಾಲಿನ್ ಪ್ರತಿಪಕ್ಷವಾದ ಎಐಎಡಿಎಂಕೆ ಹಾವುಗಳಿಗೆ ಆಶ್ರಯ ನೀಡುವ ತಾಣವಾಗಿದೆ ಎಂದು ಹೇಳಿದ್ದಾರೆ.

ಮನೆಗೆ ಹಾವು ಬಂದರೆ ಏನು ಮಾಡುತ್ತೀರಿ. ಅದನ್ನು ಹಿಡಿದು ಮನೆಯ ಹತ್ತಿರದ ಕಾಡಿಗೆ ಬಿಡುತ್ತೀರಿ. ಕೆಲವು ದಿನಗಳ ಬಳಿಕ ಮತ್ತೆ ಹಾವು ಬರುತ್ತದೆ. ಮನೆ ಬಳಿ ಇರುವ ಪೊದೆಗಳನ್ನು ತೆಗೆದರೆ ಮಾತ್ರ ಹಾವುಗಳಿಗೆ ರಕ್ಷಣೆ ಇಲ್ಲದಂತಾಗುತ್ತದೆ ಎಂದು ಎಐಎಡಿಎಂಕೆ ಬಗ್ಗೆ ವ್ಯಂಗ್ಯ ಮಾಡಿದ್ದಾರೆ.