Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ರಾಜಕೀಯ ಸಮಾವೇಶ ನಡೆಯುತ್ತಿರುವಾಗ ತನ್ನನ್ನು ಸ್ಫೋಟಿಸಿಕೊಂಡ ಆತ್ಮಾಹುತಿ ಬಾಂಬರ್

ಇಸ್ಲಾಮಾಬಾದ್ : ವಾಯುವ್ಯ ಪಾಕಿಸ್ಥಾನದಲ್ಲಿ ಭಾನುವಾರ ಸಂಜೆ ಇಸ್ಲಾಮಿಕ್ ಪಕ್ಷದ ರಾಜಕೀಯ ಸಮಾವೇಶದಲ್ಲಿ ನಡೆದ ಬಾಂಬ್ ಸ್ಫೋಟದಲ್ಲಿ ಕನಿಷ್ಠ 44 ಜನ ಸಾವನ್ನಪ್ಪಿದ್ದಾರೆ ಮತ್ತು 200ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ.

ಜಮಿಯತ್ ಉಲೇಮಾ-ಎ-ಇಸ್ಲಾಂ-ಎಫ್(ಜೆಯುಐ- ಎಫ್) ಪಕ್ಷದ ರಾಜಕೀಯ ಸಮಾವೇಶದಲ್ಲಿ ಈ ಭೀಕರ ಸ್ಫೋಟ ನಡೆದಿದೆ. ಅಫ್ಘಾನಿಸ್ತಾನ ಗಡಿ ಸಮೀಪವಿರುವ ಪತ್ತೂನ್‌ಗ್ವಾ ಪ್ರಾಂತ್ಯದ ಖಾರ್ ಪಟ್ಟಣದಲ್ಲಿ ನಡೆದ ಈ ಸಮಾವೇಶದಲ್ಲಿ 400ಕ್ಕೂ ಹೆಚ್ಚು ಸದಸ್ಯರು ಮತ್ತು ಬೆಂಬಲಿಗರು ಭಾಗವಹಿಸಿದ್ದರು.ಇದೊಂದು ಆತ್ಮಾಹುತಿ ದಾಳಿ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದುವರೆಗೂ ಯಾವುದೇ ಉಗ್ರ ಸಂಘಟನೆ ಈ ದಾಳಿಯ ಹೊಣೆಯನ್ನು ಹೊತ್ತುಕೊಂಡಿಲ್ಲ. ಆದರೆ ಐಸಿಸ್

ಸಂಘಟನೆಯ ಸ್ಥಳೀಯ ಘಟಕ ಇತ್ತೀಚೆಗೆ ಜೆಯುಐ-ಎಫ್ ಮೇಲೆ ದಾಳಿಗಳನ್ನು ನಡೆಸುತ್ತಿದೆ. ಈ ಹಿನ್ನೆಲೆಯಲ್ಲಿ ಇದು ಐಸಿಸ್ ಕೃತ್ಯ ಎಂದು ಶಂಕಿಸಲಾಗಿದೆ. ಉಲೇಮಾ-ಎ-ಇಸ್ಲಾಂ-ಎಫ್ ಪಕ್ಷದ ಕೆಲವು ಮುಖಂಡರು ಕೂಡ ಸ್ಫೋಟದಲ್ಲಿ ಸಾವಿಗೀಡಾಗಿದ್ದಾರೆ. ಆಸ್ಪತ್ರೆಯಲ್ಲಿರುವ ಹಲವು ಮಂದಿಯ ಸ್ಥಿತಿ ಚಿಂತಾಜನಕವಾಗಿದ್ದು, ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚುವ ಭೀತಿಯಿದೆ.