Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಲಂಚಪ್ರಕರಣ ಸಹಾಯಕ ಕಮಿಷನರ್ ಹಾಗೂ ಉಪ ತಹಶೀಲ್ದಾರ್ ನಾಲ್ಕು ವರ್ಷ ಜೈಲು ಶಿಕ್ಷೆ.! ಪ್ರಕರಣ ಏನು.?

 

ತುಮಕೂರು;  ವಿಶೇಷ ಲೋಕಾಯುಕ್ತ ನ್ಯಾಯಾಲಯವು ಸಹಾಯಕ ಕಮಿಷನರ್ ತಬಸ್ಸುಮ್ ಜಹೇರಾ ಮತ್ತು ಉಪ ತಹಶೀಲ್ದಾರ್ ಶಬ್ಬೀರ್ ಅಹ್ಮದ್ ಅವರಿಬ್ಬರನ್ನು ಲಂಚ ಸ್ವೀಕರಿಸಿದ ಆರೋಪದಲ್ಲಿ ದೋಷಿ ಎಂದು ಘೋಷಿಸಿದ್ದು, ಇಬ್ಬರಿಗೂ ನಾಲ್ಕು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.

ತಬಸ್ಸುಮ್ ಜಹೇರಾ ಪ್ರಸ್ತುತ ಕೆಐಎಡಿಬಿಯ ವಿಶೇಷ ಭೂಸ್ವಾಧೀನ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದರೆ, ಅಹ್ಮದ್ ತುಮಕೂರು ಜಿಲ್ಲೆಯ ಬೆಳ್ಳಾವಿಯಲ್ಲಿ ಉಪ ತಹಶೀಲ್ದಾರ್ ಆಗಿದ್ದಾರೆ.

ಕುಣಿಗಲ್ ತಾಲೂಕಿನ ಯಡಿಯೂರು ಹೋಬಳಿಯ ಆವರಗೆರೆ ನಿವಾಸಿ ವಿ.ಟಿ. ಜಯರಾಂ ಅವರ ತಂದೆಗೆ ಸೇರಿದ ಜಮೀನನ್ನು ಅಕ್ರಮವಾಗಿ ಮಾರಾಟ ಮಾಡಲಾಗಿದೆ ಎಂದು ದೂರು ಸಲ್ಲಿಸಿದ್ದರು. ತಮ್ಮ ತಂದೆಯ ಹೆಸರಿಗೆ ಜಮೀನಿನ ದಾಖಲೆಗಳನ್ನು ಮರು ವರ್ಗಾಯಿಸಿ, ಮಾಲೀಕತ್ವವನ್ನು ಮರುಸ್ಥಾಪಿಸುವಂತೆ ಕೋರಿ ಅಂದಿನ ಸಹಾಯಕ ಆಯುಕ್ತರಾದ ತಬಸ್ಸುಮ್ ಅವರಿಗೆ ಅರ್ಜಿ ಸಲ್ಲಿಸಿದ್ದರು. ಎಸಿ ತನ್ನ ಕಚೇರಿಯ ಸಿಬ್ಬಂದಿ ಶಬ್ಬೀರ್ ಅವರನ್ನು ಭೇಟಿಯಾಗುವಂತೆ ಕೇಳಿದ್ದರು. ಈ ಮಧ್ಯೆ ಕೆಲಸ ಮಾಡಿಕೊಡಲು 35,000 ರೂ. ಲಂಚ ಬೇಡಿಕೆ ಮುಂದಿಟ್ಟಿದ್ದರು.

ಲಂಚ ಕೊಟ್ಟರೂ ಜಯರಾಮ್ ಕಂಬ ಸುತ್ತಾಟ ಮುಂದುವರಿದಿತ್ತು. ಕೆಸಲ ಮಾತ್ರ ಆಗಿರಲಿಲ್ಲ. ಬದಲಿಗೆ ಅಂದಿನ ಉಪ ತಹಶೀಲ್ದಾರ್ ಶಬ್ಬೀರ್ ಇನ್ನಷ್ಟು ಲಂಚಕ್ಕೆ ಬೇಡಿಕೆ ಇಟ್ಟಿದ್ದ. ಒಮ್ಮೆ ತಮ್ಮ ನಡುವಣ ಭೇಟಿಯಲ್ಲಿ ಅಧಿಕಾರಿಗಳ ಜೊತೆಗಿನ ಸಂಭಾಷಣೆಯನ್ನು ಜಯರಾಮ್ ರೆಕಾರ್ಡ್ ಮಾಡಿದರು. ಮೇ 23, 2017 ರಂದು ಜಯರಾಂ ಅವರು ಆಡಿಯೋ ಟೇಪ್ ಸಹಿತ ಎಸಿಬಿಗೆ ದೂರು ನೀಡಿದ್ದರು.

ವಿಶೇಷ ನ್ಯಾಯಾಲಯದ ನ್ಯಾಯಾಧೀಶ ರಾಮಲಿಂಗೇಗೌಡ ಅವರು ಅಧಿಕಾರಿಗಳನ್ನು ತಪ್ಪಿತಸ್ಥರೆಂದು ಘೋಷಿಸಿದರು ಮತ್ತು ಅವರಿಗೆ ತಲಾ ನಾಲ್ಕು ವರ್ಷಗಳ ಜೈಲು ಶಿಕ್ಷೆ ವಿಧಿಸಿದ್ದಾರೆ.