Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

‘ಸಮಾಜದಲ್ಲಿ ಅಸಮಾನತೆ ಇರುವವರೆಗೂ ಮೀಸಲಾತಿ ಮುಂದುವರಿಯಬೇಕು’- ಭಾಗವತ್‌

ನವದೆಹಲಿ:ನಮ್ಮ ಸಮಾಜದಲ್ಲಿ ಅಸಮಾನತೆ ಇರುವವರೆಗೂ ಮೀಸಲಾತಿ ಮುಂದುವರಿಯಬೇಕು ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖ್ಯಸ್ಥ ಮೋಹನ್‌ ಭಾಗವತ್‌ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ನಾಗ್ಪುರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, 1947ರಲ್ಲಿ ಭಾರತದಿಂದ ಪ್ರತ್ಯೇಕಗೊಂಡವರು ಈಗ ತಾವು ತಪ್ಪು ಮಾಡಿದ್ದೇವೆ ಎಂದು ಭಾವಿಸುತ್ತಿರುವಂತೆ, ಇಂದಿನ ಯುವಪೀಳಿಗೆ ವಯಸ್ಕರಾಗುವ ಮೊದಲು ಅಖಂಡ ಭಾರತ ಅಥವಾ ಅವಿಭಜಿತ ಭಾರತದ ಕನಸು ನನಸಾಗಲಿದೆ ಎಂದರು.

ಮಹಾರಾಷ್ಟ್ರದಲ್ಲಿ ಮೀಸಲಾತಿಗಾಗಿ ಮರಾಠ ಸಮುದಾಯದ ಪ್ರತಿಭಟನೆ ತೀವ್ರಗೊಂಡ ಹಿನ್ನೆಲೆಯಲ್ಲಿ ಮೋಹನ್‌ ಭಾಗವತ್‌ ಈ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ.

ನಮ್ಮ ಸಾಮಾಜಿಕ ವ್ಯವಸ್ಥೆಯಲ್ಲಿ ನಮ್ಮವರನ್ನೇ ನಾವು ಕತ್ತಲೆಯಲ್ಲಿ ಇರಿಸಿದ್ದೇವೆ. ನಾವು ಅವರ ಬಗ್ಗೆ ಯಾವುದೇ ಕಾಳಜಿ ವಹಿಸಿಲ್ಲ. ಇದರ ಪರಿಣಾಮ ಇದು 2000 ವರ್ಷಗಳವರೆಗೂ ಮುಂದುವರೆಯಿತು. ನಾವು ಅವರಿಗೆ ಸಮಾನತೆಯನ್ನು ನೀಡುವವರೆಗೆ, ಕೆಲವು ವಿಶೇಷ ಪರಿಹಾರಗಳನ್ನು ಒದಗಿಸಬೇಕಾಗುತ್ತದೆ. ಇದರಲ್ಲಿ ಮೀಸಲಾತಿಯೂ ಕೂಡಾ ಒಂದು. ನಮ್ಮ ಸಮಾಜದಲ್ಲಿ ತಾರತಮ್ಯ ಹೋಗಿಲ್ಲ. ಅಸಮಾನತೆ ಇರುವವರೆಗೂ ಮೀಸಲಾತಿ ಮುಂದುವರಿಯಬೇಕು. ನಾವು ಸಂವಿಧಾನದಲ್ಲಿ ಒದಗಿಸಿರುವ ಮೀಸಲಾತಿಗೆ ಎಲ್ಲಾ ರೀತಿಯ ಬೆಂಬಲ ನೀಡುತ್ತೇವೆ ಎಂದು ಭಾಗವತ್‌ ಹೇಳಿದರು

ಮೀಸಲಾತಿ ಎಂದರೆ ಗೌರವವನ್ನು ನೀಡುವುದಾಗಿದೆ. ಇದು ಆರ್ಥಿಕ ಅಥವಾ ರಾಜಕೀಯ ಸಮಾನತೆಯನ್ನು ಖಚಿತಪಡಿಸುವ ವಿಷಯವಲ್ಲ ಎಂದು ಭಾಗವತ್‌ ತಿಳಿಸಿದ್ದಾರೆ