Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಸೆಪ್ಟೆಂಬರ್​ 7ಕ್ಕೆ ಭಾರತ್​ ಜೋಡೋ ಯಾತ್ರೆಗೆ ಒಂದು ವರ್ಷ.. ಕಾಂಗ್ರೆಸ್​ನಿಂದ ದೇಶಾದ್ಯಂತ ಒಂದು ದಿನ ಪಾದಯಾತ್ರೆ…!

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಅವರು ತಮಿಳುನಾಡಿನ ಕನ್ಯಾಕುಮಾರಿಯಿಂದ ಹಿಡಿದು ಜಮ್ಮು ಮತ್ತು ಕಾಶ್ಮೀರದವರೆಗೆ ನಡೆಸಿದ ಭಾರತ್​ ಜೋಡೋ ಯಾತ್ರೆ ಸೆಪ್ಟೆಂಬರ್​ 7ಕ್ಕೆ ಒಂದು ವರ್ಷ ತುಂಬಲಿದೆ.

ವಾರ್ಷಿಕೋತ್ಸವದ ನೆನಪಿಗಾಗಿ ಇಡೀ ದೇಶಾದ್ಯಂತ ಅದೇ ದಿನ ಎಲ್ಲ ಜಿಲ್ಲೆಗಳಲ್ಲಿ ಯಾತ್ರೆ ಕೈಗೊಳ್ಳಲು ಕಾಂಗ್ರೆಸ್​ ನಿರ್ಧರಿಸಿದೆ. ಕಾರ್ಯಕ್ರಮದ ವಿವರಗಳನ್ನು ಪಕ್ಷವು ಇನ್ನಷ್ಟೇ ಪ್ರಕಟಿಸಬೇಕಾಗಿದೆ.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ಕಳೆದ ವರ್ಷ ಸೆಪ್ಟೆಂಬರ್ 7 ರಂದು ಕನ್ಯಾಕುಮಾರಿಯಲ್ಲಿ ಪ್ರಾರಂಭವಾದ ಭಾರತ್ ಜೋಡೋ ಯಾತ್ರೆಯು ಜನವರಿ 30 ರಂದು ಶ್ರೀನಗರದಲ್ಲಿ ಮುಕ್ತಾಯವಾಗಿತ್ತು. ಈ ಸುದೀರ್ಘ ಪಾದಯಾತ್ರೆಯು ಅಜಮಾಸು 4,000 ಕಿ.ಮೀ ಸಾಗಿ ಬಂದಿತ್ತು. ಇದು 12 ರಾಜ್ಯಗಳು ಮತ್ತು ಎರಡು ಕೇಂದ್ರಾಡಳಿತ ಪ್ರದೇಶಗಳನ್ನು ಕ್ರಮಿಸಿ 130 ದಿನಗಳಿಗೂ ಹೆಚ್ಚು ಕಾಲ ನಡೆದಿತ್ತು.

ಕಾಂಗ್ರೆಸ್​ ನಾಯಕ ನಡೆಸಿದ ಈ ಪಾದಯಾತ್ರೆಯಲ್ಲಿ ಸಾವಿರಾರು ಜನರು ಭಾಗಿಯಾಗಿದ್ದರು. ಜಮ್ಮು ಮತ್ತು ಕಾಶ್ಮೀರ ಲಾಲ್​ಚೌಕ್​ನಲ್ಲಿ ರಾಷ್ಟ್ರಧ್ವಜವನ್ನು ಹಾರಿಸಲಾಗಿತ್ತು. ಕೇಂದ್ರ ಸರ್ಕಾರದ ವಿರುದ್ಧ ತೊಡೆತಟ್ಟಿ ನಡೆಸಲಾಗಿದ್ದ ಯಾತ್ರೆಗೆ ಹೆಚ್ಚಿನ ಜನ ಬೆಂಬಲವೂ ಲಭ್ಯವಾಗಿತ್ತು. ಅಲ್ಲದೇ ಕರ್ನಾಟಕ, ಹಿಮಾಚಲಪ್ರದೇಶದಂತಹ ರಾಜ್ಯಗಳಲ್ಲಿ ಪ್ರಭಾವ ಬೀರಿ ಚುನಾವಣೆಯಲ್ಲಿ ಗೆಲುವು ತಂದುಕೊಟ್ಟಿದೆ ಎಂದು ಪಕ್ಷ ಹೇಳಿಕೊಂಡಿದೆ.

ಹೀಗಾಗಿ ಪಕ್ಷ ಭಾರತ್​ ಜೋಡೋ ಯಾತ್ರೆ ಆರಂಭವಾದ ದಿನದ ವಾರ್ಷಿಕೋತ್ಸವದ ಅಂಗವಾಗಿ ದೇಶಾದ್ಯಂತ ಅಂದು ಒಂದು ದಿನದ ಯಾತ್ರೆ ನಡೆಸಲು ಮುಂದಾಗಿದೆ ಎಂದು ತಿಳಿದುಬಂದಿದೆ. ಕಾಂಗ್ರೆಸ್​ ನಾಯಕರು ಮತ್ತು ಕಾರ್ಯಕರ್ತರು ಆಯಾ ಜಿಲ್ಲೆಗಳಲ್ಲಿ ಪಾದಯಾತ್ರೆ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ.

ಭಾರತ್​ ಜೋಡೋ 2.0 : ದಕ್ಷಿಣೋತ್ತರವಾಗಿ ರಾಹುಲ್​ ನಡೆಸಿದ್ದ ಪಾದಯಾತ್ರೆ ಬಳಿಕ ಭೇಟಿ ನೀಡದ ಪಶ್ಚಿಮ ಮತ್ತು ಪೂರ್ವ ರಾಜ್ಯಗಳಿಗೆ ಭಾರತ್​ ಜೋಡೋ ಯಾತ್ರೆ 2.0 ನಡೆಸಲು ಉದ್ದೇಶಿಸಲಾಗಿದೆ. 2ನೇ ಹಂತದ ಭಾರತ್ ಜೋಡೋ ಯಾತ್ರೆಯನ್ನು ಅಕ್ಟೋಬರ್​ನಲ್ಲಿ ಆರಂಭಿಸುವ ಸಾಧ್ಯತೆ ಇದೆ. ಈ ಬಗ್ಗೆ ಕಾಂಗ್ರೆಸ್‌ನಿಂದ ಯಾವುದೇ ಅಧಿಕೃತ ಘೋಷಣೆ ಮಾಡಿಲ್ಲವಾದರೂ, ಗುಜರಾತ್​​ನಿಂದ ಮೇಘಾಲಯದವರೆಗೆ ಯಾತ್ರೆ ನಡೆಸಲಿದ್ದಾರೆ ಎಂಬ ಮಾತುಗಳು ಪಕ್ಷದಲ್ಲಿ ಕೇಳಿಬಂದಿವೆ.

ರಾಹುಲ್ ಗಾಂಧಿ ನಡೆಸಿದ ಯಾತ್ರೆಯ ಪ್ರಭಾವವು ಕರ್ನಾಟಕ ಮತ್ತು ಹಿಮಾಚಲ ಪ್ರದೇಶದ ಚುನಾವಣೆಯಲ್ಲಿ ಪ್ರಭಾವ ಕಂಡುಬಂದಿತ್ತು. ಈ ರಾಜ್ಯಗಳಲ್ಲಿ ನಡೆಸಿದ ಯಾತ್ರೆಯಿಂದ ಮತ ಹಂಚಿಕೆಯಲ್ಲಿ ಪಕ್ಷ ಏರಿಕೆ ದಾಖಲಿಸಿದೆ. ಕರ್ನಾಟಕದಲ್ಲಿ ನಡೆದ ಯಾತ್ರೆಯು ಗುಂಡ್ಲುಪೇಟೆಯಿಂದ ಪ್ರವೇಶಿಸಿ ರಾಯಚೂರು ಗ್ರಾಮಾಂತರ ಕ್ಷೇತ್ರದಿಂದ ತೆಲಂಗಾಣಕ್ಕೆ ತೆರಳಿತ್ತು. ಇಲ್ಲಿ 22 ದಿನಗಳ ಕಾಲ 511 ಕಿ.ಮೀ ಯಾತ್ರೆ ನಡೆದಿತ್ತು.