Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಸೌಜನ್ಯ ಅತ್ಯಾಚಾರಿಗಳಿಗೆ 6 ತಿಂಗಳೊಳಗೆ ಶಿಕ್ಷೆಯಾದ್ರೆ ಕಾನತ್ತೂರು ದೈವಗಳಿಗೆ ಬಂಗಾರ ನಾಲಿಗೆ, 1 ದಿನದ ನೇಮೋತ್ಸವ.!

ಬೆಳ್ತಂಗಡಿ: ಧರ್ಮಸ್ಥಳದ ಸಮೀಪ ಭೀಕರ ಅತ್ಯಾಚಾರಕ್ಕೀಡಾಗಿ ಕೊಲೆಗೀಡಾಗಿದ್ದ ಸೌಜನ್ಯ ಹತ್ಯೆ ಪ್ರಕರಣಕ್ಕೆ 11 ವರ್ಷಗಳ ಬಳಿಕ ಮರುಜೀವ ಬಂದಿದೆ. ಸಿಬಿಐ ವಿಶೇಷ ಕೋರ್ಟ್‌ನಲ್ಲಿ ಸಂತೋಷ್ ರಾವ್ ನಿರಪರಾಧಿ ಎಂದು ತೀರ್ಪು ಬರುತ್ತಲೇ ನಿಜವಾದ ಅಪರಾಧಿ ಯಾರು ಅನ್ನುವ ಪ್ರಶ್ನೆ ಎದ್ದಿದೆ? ಈ ನಡುವೆಯೇ ಸೌಜನ್ಯಳ ಮಾವ ಇದೀಗ ದೈವ ದೇವರಿಗೆ ಹರಕೆ ಹೊತ್ತಿರುವುದು ಸುದ್ದಿಯಾಗಿದೆ. ಸೌಜನ್ಯ ಕೊಲೆಗೆ ಕಾರಣವಾದ ಅಪರಾಧಿಗಳಿಗೆ ಇನ್ನು ಆರು ತಿಂಗಳ ಒಳಗಾಗಿ ಸರಿಯಾದ ಶಿಕ್ಷೆಯಾಗಬೇಕು, ಹಾಗಾದರೆ ನಾನು ಹರಕೆ ತೀರಿಸುತ್ತೇನೆ ಎಂದು ಪ್ರತಿಜ್ಞೆ ಮಾಡಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವಿಠಲ ಗೌಡ ಪೋಸ್ಟ್‌ವೊಂದನ್ನು ಪ್ರಕಟಿಸಿದ್ದಾರೆ. ಇದರ ಸತ್ಯಾಸತ್ಯತೆಯ ಬಗ್ಗೆ ತಿಳಿದುಕೊಳ್ಳಲು ಮಾಧ್ಯಮ ಪ್ರತಿನಿಧಿಗಳು ಸಂಪರ್ಕಿಸಿದಾಗ ಮಾತನಾಡಿದ ಅವರು, ಸೌಜನ್ಯ ಅತ್ಯಾಚಾರಿಗಳಿಗೆ 6 ತಿಂಗಳೊಳಗೆ ಶಿಕ್ಷೆಯಾದ್ರೆ ಕಾನತ್ತೂರು ದೈವಗಳಿಗೆ ಬಂಗಾರ ನಾಲಿಗೆ, 1 ದಿನದ ನೇಮೋತ್ಸವವನ್ನು ನೀಡುತ್ತೇವೆ. ಧರ್ಮಸ್ಥಳದ ಮಂಜುನಾಥ ಸ್ವಾಮಿಗೆ ಬೆಳ್ಳಿ ರಥ, ಅಣ್ಣಪ್ಪನಿಗೆ ಬಂಗಾರದ ಕಡಸಾಲೆ ಹರಕೆಯಾಗಿ ಒಪ್ಪಿಸುವುದಾಗಿ ತಿಳಿಸಿದ್ದಾರೆ.