Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಅನ್ನದ ಹಸಿವಿಗಿಂತಲೂ ಜೀವನ ಪ್ರೀತಿಯ ಹಸಿವನ್ನು ಹೆಚ್ಚಿಸಿಕೊಳ್ಳಬೇಕು: ಶ್ರೀ ಬಸವಪ್ರಭು ಸ್ವಾಮಿಗಳು

 

ಚಿತ್ರದುರ್ಗ: ಜಗತ್ತಿನಲ್ಲಿ ಅನ್ನದ ಹಸಿವಿಗಿಂತಲೂ ಜೀವನ ಪ್ರೀತಿಯ ಹಸಿವನ್ನು ಹೆಚ್ಚಿಸಿಕೊಳ್ಳಬೇಕು. ಜೀವನ ಪ್ರೀತಿ ಇಲ್ಲದಿದ್ದರೆ ಬದುಕುವುದಕ್ಕೆ ಅಸಾಧ್ಯ ಎಂದು ಶ್ರೀ ಬಸವಪ್ರಭು ಸ್ವಾಮಿಗಳು ನುಡಿದರು.

ನಗರದ ಶ್ರೀ ಮುರುಘರಾಜೇಂದ್ರ ಬೃಹನ್ಮಠದಲ್ಲಿಂದು ನಡೆದ 33ನೇ ವರ್ಷದ ಹನ್ನೊಂದನೇ ತಿಂಗಳ ಸಾಮೂಹಿಕ ಕಲ್ಯಾಣ ಮಹೋತ್ಸವದಲ್ಲಿ 10 ಜೋಡಿಗಳ ವಿವಾಹ ನೆರವೇರಿಸಿ ಶ್ರೀಗಳು ಮಾತನಾಡಿದರು.

ಸಂಸಾರದಲ್ಲಿ ಸತಿಪತಿಗಳ ನಡುವೆ ಪ್ರೀತಿ ನಗುತಿರಬೇಕು. ಜೀವನದಲ್ಲಿ ಸುಖ ದುಃಖಗಳನ್ನು ಎದೆಗುಂದದೆ ಸಹನಾಮಯಿಗಳಾಗಿ ಸಮಾನವಾಗಿ ಸ್ವೀಕರಿಸಬೇಕು. ಕೊನೆಯವರೆಗೂ ಉತ್ತಮ ಸ್ನೇಹಿತರಾಗಿರಬೇಕು. ಮಾನವನಿಗೆ ಎರಡು ಕಣ್ಣುಗಳಿದ್ದರೂ ದೃಷ್ಟಿ ಒಂದೇ. ಎರಡು ಕಿವಿಯಿದ್ದರೂ ಕೇಳುವ ಶಬ್ದ ಒಂದೇ. ಅದರಂತೆ ದೇಹ ಎರಡಾದರೂ ದಂಪತಿಗಳ ಭಾವನೆ ಆಲೋಚನೆಗಳು ಒಂದೇ ಆದಾಗ ಜೀವನವೇ ಸ್ವರ್ಗ. ಅಂತಹ ಬದುಕು ನಿಮ್ಮೆಲ್ಲರದಾಗಲಿ ಎಂದರು.

ಕವಲೆತ್ತು ಬಸವಕೇಂದ್ರದ ಶರಣೆ ಮುಕ್ತಾಯಕ್ಕ ಮಾತನಾಡಿ, ಮಾನವ ಬದುಕಿನಲ್ಲಿ ಕಲ್ಯಾಣ ಅನ್ನುವ ದೀಕ್ಷೆ ಸಾರ್ಥಕತೆ ಪಡೆಯುತ್ತದೆ. ಮದುವೆ ಅನ್ನುವುದು ಜೀವನದ ಒಂದು ಹಂತದಲ್ಲಿ ಸಂಭ್ರಮಪಡುವAತಹದ್ದಾಗಿದೆ. ಶಿವಪಥವನರಿವಡೆ ಗುರು ಪಥವೇ ಮೊದಲು ಎಂದಿದ್ದಾರೆ ಶಿವಶರಣರು. ನೂತನ ವಧುವರರು ಅಂಥ ಗುರು ಮಠದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದೀರಿ. ಅರಿವಿಲ್ಲದವರಿಗೆ ಅರಿವನ್ನು ಮೂಡಿಸುವವನೇ ಗುರು. ನಿಮಗೆಲ್ಲ ಶುಭವಾಗಲಿ ಎಂದು ಹೇಳಿದರು.

ವಿಭೂತಿ ಬಸವಾನಂದ ಸ್ವಾಮಿಗಳು ಮಾತನಾಡಿ, ಚಿತ್ರದುರ್ಗ ನಗರದಲ್ಲಿ ಶ್ರೀಮಠವು ಒಂದು ಮಹತ್ವಪೂರ್ಣವಾದ ಅನುಭವ ಮಂಟಪವನ್ನು ನಿರ್ಮಿಸಿ, ಕಲ್ಯಾಣ ಕಾರ್ಯಗಳನ್ನು ಮಾಡುತ್ತ ಶರಣ ಪರಂಪರೆಯನ್ನು ಶೂನ್ಯಪೀಠ ಪರಂಪರೆಯನ್ನು ಮುಂದುವರಿಸಿಕೊAಡು ಹೋಗುತ್ತಿದೆ. 12ನೇ ಶತಮಾನದಲ್ಲಿ ಕಲ್ಯಾಣದಲ್ಲಿ ನಡೆದ ಸಂದರ್ಭವು ಸರ್ವಜನಾಂಗಕ್ಕೆ ಸಮಾನತೆಯನ್ನು ಕೊಟ್ಟಿತು. ಬಸವಮಾರ್ಗ ಇವತ್ತಿನ ಜಗತ್ತಿಗೆ ಅನಿವಾರ್ಯವಾಗಿದೆ ಎಂದರು.

ಜಮುರಾ ಕಲಾಲೋಕದ ಕಲಾವಿದರು ವಚನ ಪ್ರಾರ್ಥನೆ ಮಾಡಿದರು. ದಾವಣಗೆರೆ ಸಾಹಿತಿ

ಡಾ. ಶಿವಕುಮಾರ್ ಸ್ವಾಗತಿಸಿದರು. ಚಿನ್ಮಯಿ ದೇವರು ನಿರೂಪಿಸಿದರು. ಟಿ.ಪಿ. ಜ್ಞಾನಮೂರ್ತಿ ವಂದಿಸಿದರು.