Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

‘ಆಟ ಇನ್ನು ಮುಗಿದಿಲ್ಲ, ಅಸಲಿ ಆಟ ಇನ್ನು ಶುರು’- ಇಸ್ರೇಲ್ ಪ್ರಧಾನಿ ಎಚ್ಚರಿಕೆ

ಟೆಲ್ ಅವಿವ್: ಪ್ಯಾಲೆಸ್ತೀನ್ ಮತ್ತು ಇಸ್ರೇಲ್ ನಡುವೆ ಯುದ್ಧ 9ನೇ ದಿನಕ್ಕೆ ಕಾಲಿಟ್ಟಿದೆ. ಈ ನಡುವೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಸ್ವತಃ ಯುದ್ಧಭೂಮಿಗಿಳಿದಿದ್ದು, ಹಮಾಸ್ ಬಂಡುಕೋರರಿಗೆ ನೇರ ಎಚ್ಚರಿಕೆಯನ್ನು ನೀಡಿದ್ದಾರೆ.

ಗಾಜಾ ಪಟ್ಟಿಯಲ್ಲಿರುವ ಇಸ್ರೇಲ್ ರಕ್ಷಣಾ ಪಡೆಗಳನ್ನು ಭೇಟಿ ಮಾಡಿದ ನೆತನ್ಯಾಹು ಸೈನಿಕರ ಸ್ಥೈರ್ಯವನ್ನು ಹೆಚ್ಚಿಸಿದ್ದಾರೆ. ಐಡಿಎಫ್ ಸಿಬ್ಬಂದಿಯೊಂದಿಗಿನ ಸಂವಾದದ ದೃಶ್ಯಗಳನ್ನು ಇಸ್ರೇಲ್ ಪ್ರಧಾನಿ ಸಾಮಾಜಿಕ ಜಾಲತಾಣವಾದ ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ.

ಆಟ ಇನ್ನು ಮುಗಿದಿಲ್ಲ, ಅಸಲಿ ಆಟ ಇನ್ನು ಶುರು ಎನ್ನುವ ಮೂಲಕ ಸೈನಿಕರ ಜೊತೆಗಿನ ಸಂವಾದದಲ್ಲಿ ಹಮಾಸ್ ಬಂಡುಕೋರರಿಗೆ ನೆತನ್ಯಾಹು ಬಿಸಿ ಮುಟ್ಟಿಸಿದ್ದಾರೆ. ನಾವೆಲ್ಲರೂ ಸಿದ್ಧ ಎಂದು ತೀವ್ರ ಪ್ರತಿದಾಳಿಯ ಸಂದೇಶ ನೀಡಿದ್ದಾರೆ.

ಗಾಜಾಪಟ್ಟಿಯಲ್ಲಿ ಇಸ್ರೇಲ್ ಏರ್‌ಸ್ಟ್ರೈಕ್ ಮುಂದುವರೆದಿದ್ದು ಹಲವು ಸ್ಥಳಗಳು ಧ್ವಂಸವಾಗಿದೆ. ಜಬಾಲಿಯಾ, ಬೀಚ್ ಕ್ಯಾಂಪ್‌ನಲ್ಲಿ ಶನಿವಾರ ಇಸ್ರೇಲ್ ದಾಳಿ ನಡೆಸಿದ್ದು, ಹತ್ತಾರು ಜನರು ಸಾವನ್ನಪ್ಪಿದ್ದಾರೆ. ಅಲ್ಲದೇ ನೂರಾರು ಜನರು ಗಾಯಗೊಂಡಿದ್ದಾರೆ.

ಇದೀಗ ಸಮುದ್ರ ಮಾರ್ಗದಲ್ಲೂ ಹಮಾಸ್ ಮತ್ತು ಇಸ್ರೇಲ್ ಮುಖಾಮುಖಿಯಾಗಿ ಇಸ್ರೇಲ್ ಗಡಿ ಪ್ರವೇಶಕ್ಕೆ ಪ್ರಯತ್ನಿಸಿದ ಹಮಾಸ್ ಮೇಲೆ ಇಸ್ರೇಲ್ ಗುಂಡಿನ ದಾಳಿ ನಡೆಸಿದೆ. ಸಮುದ್ರ ಮಾರ್ಗದ ಮೂಲಕ ದಾಳಿಗೆ ಹಮಾಸ್ ಯತ್ನಿಸಿದ್ದು, ಹಮಾಸ್ ದೋಣಿಯನ್ನೇ ಇಸ್ರೇಲ್ ನಾಶ ಮಾಡಿದೆ.