Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಇಬ್ಬರು ಮಕ್ಕಳೊಂದಿಗೆ ತಾಯಿ ನಿಗೂಢ ಸಾವು..!

ಹಾಸನ: ತಾಯಿಯೊಬ್ಬಳು ತನ್ನ ಇಬ್ಬರು ಪುಟ್ಟ ಮಕ್ಕಳೊಂದಿಗೆ ನಿಗೂಢವಾಗಿ ಮೃತಪಟ್ಟಿರುವ ದಾರುಣ ಘಟನೆ ಹಾಸನ ನಗರದ ದಾಸರಕೊಪ್ಪಲಿನಲ್ಲಿ ನಡೆದಿದೆ.

ತುಮಕೂರಿನ ಬೇಕರಿಯಲ್ಲಿ ಕೆಲಸ ಮಾಡುವ ಹಾಸನ ತಾಲೂಕು ಸೀಗೆ ಗ್ರಾಮದ ತೀರ್ಥ ಎಂಬವರ ಪತ್ನಿ ಶಿವಮ್ಮ (36), ಮಕ್ಕಳಾದ ಸಿಂಚು (7) ಪವನ (10) ಮೃತಪಟ್ಟವರು.

ತೀರ್ಥ ಅವರು ತುಮಕೂರಿನ ಬೇಕರಿಯಲ್ಲಿ ಕೆಲಸ ಮಾಡಿಕೊಂಡಿದ್ದು, ಇವರ ಕುಟುಂಬ ಹಾಸನದ ಒಂದು ಪುಟ್ಟ ಮನೆಯಲ್ಲಿ ವಾಸ ಮಾಡಿಕೊಂಡಿತ್ತು. ಸೋಮವಾರ ಸಂಜೆ ಪತ್ನಿಗೆ ದೂರವಾಣಿ ಕರೆ ಮಾಡಿದ್ದ ಪತಿ ತೀರ್ಥ ತಾನು ಹಾಸನಕ್ಕೆ ಬರುತ್ತಿದ್ದು ರಾತ್ರಿ ಊಟಕ್ಕೆ ಅಡುಗೆ ಸಿದ್ಧಪಡಿಸಲು ಹೇಳಿದ್ದರು. ಆದರೆ ಮನೆ ತಲುಪುವಾಗ ತಡವಾಗಿ ಬಂದಿದ್ದು ಬಾಗಿಲು ತಟ್ಟಿದಾಗ ಹಾಗೂ ಫೋನ್ ಕರೆ ಸ್ವೀಕರಿಸದ ಪತ್ನಿ ನಿದ್ರೆ ಹೋಗಿರಬಹುದು ಎಂದು ಭಾವಿಸಿದ ತೀರ್ಥ ಕೊನೆಗೆ ಮನೆಯ ಮೇಲ್ಛಾವಣಿಗೆ ಹೋಗಿ ಮಲಗಿದ್ದರು.

ಬೆಳಗ್ಗೆ ಕೆಳಗೆ ಬಂದು ಪುನಃ ಬಾಗಿಲು ಬಡಿದರೂ ಬಾಗಿಲು ತೆಗೆಯಲಿಲ್ಲ, ಫೋನ್ ಕರೆ ಮಾಡಿದರೂ ಪ್ರತಿಕ್ರಿಯೆ ಬಾರದ್ದರಿಂದ ಅನುಮಾನಗೊಂಡ ಆತ ಮನೆ ಮಾಲೀಕರ ಸಹಾಯದಿಂದ ಇನ್ನೊಂದು ಕೀ ಪಡೆದು ಬಾಗಿಲು ತೆರೆದು ಒಳಗೆ ಹೋದರು. ಆಗ ಪತ್ನಿ ಮತ್ತು ಇಬ್ಬರು ಮಕ್ಕಳು ಶವವಾಗಿ ಬಿದ್ದಿರುವುದು ಕಂಡುಬಂದಿದೆ. ಮನೆಯ‌ ಹಾಲ್‌ ಮತ್ತು ಅಡುಗೆ ಕೋಣೆಯ ನಡುವಿನ ಜಾಗದಲ್ಲಿ ಮೂವರ ಶವ ಪತ್ತೆಯಾಗಿದೆ. ನೆಲದ ಮೇಲೆ ಕುಳಿತ ತಾಯಿಯ ಕಾಲುಗಳ ಮೇಲೆ ಇಬ್ಬರು ಮಕ್ಕಳೂ ಪ್ರಾಣ ಕಳೆದುಕೊಂಡ ದಾರುಣ ದೃಶ್ಯ ಎಂತವರ ಮನಸ್ಸನ್ನು ಕಲಕುತ್ತಿತ್ತು.

ಸಾವಿಗೆ ಆತ್ಮಹತ್ಯೆ ಕಾರಣವೇ, ಅಥವಾ ವಿಷ ಅನಿಲದ ಪ್ರಭಾವವೋ ಸದ್ಯ ತಿಳಿದುಬಂದಿಲ್ಲ. ಪೆನ್‌ಷನ್‌ಮೊಹಲ್ಲಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.