Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ದೆಹಲಿಯ ಉನ್ನತ ಅಧಿಕಾರಿ ಪುತ್ರನ ಹತ್ಯೆ: ಓರ್ವ ವಶಕ್ಕೆ, ಮತ್ತೋರ್ವ ಪರಾರಿ

ಹರಿಯಾಣ: ದೆಹಲಿಯ ಉನ್ನತ ಅಧಿಕಾರಿ ಪುತ್ರನನ್ನು ಆತನ ಸ್ನೇಹಿತರೇ ಹತ್ಯೆ ಮಾಡಿರುವ ಘಟನೆ ಹರಿಯಾಣದ ಸೋನೆಪತ್ ನಲ್ಲಿ ನಡೆದಿದೆ.

ಲಕ್ಷ್ಯ ಚೌಹಾಣ್ (24) ಹತ್ಯೆಯಾದ ವ್ಯಕ್ತಿ.

ವಕೀಲರಾದ ಲಕ್ಷ್ಯ ಚೌಹಾಣ್ ಅವರು ದೆಹಲಿಯ ಸಹಾಯಕ ಪೊಲೀಸ್ ಆಯುಕ್ತ ಯಶ್ಪಾಲ್ ಸಿಂಗ್ ಅವರ ಪುತ್ರ. ಲಕ್ಷ್ಯ ಅವರ ಇಬ್ಬರು ಸ್ನೇಹಿತರಾದ ವಿಕಾಸ್ ಭಾರದ್ವಾಜ್ ಹಾಗೂ ಅಭಿಷೇಕ್ ಎಂಬುವವರು ಅವರನ್ನು ಕಾಲುವೆಗೆ ತಳ್ಳಿ ಹತ್ಯೆ ಮಾಡಿದ್ದರು. ಲಕ್ಷ್ಯ ಅವರ ಹತ್ಯೆಗೆ ಹಣಕಾಸಿನ ವ್ಯವಹಾರ ಇರುವುದು ಮೇಲ್ನೋಟಕ್ಕೆ ತಿಳಿದು ಬಂದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಘಟನೆ ಹಿನ್ನಲೆ…
ಲಕ್ಷ್ಯ ಚೌಹಾಣ್ ಅವರು ನ್ಯಾಯಾಲಯದಲ್ಲಿ ಕ್ಲರ್ಕ್ ಆಗಿದ್ದ ವಿಕಾಸ್ ಭಾರದ್ವಾಜ್ ಎಂಬಾತನಿಂದ ಹಣವನ್ನು ಪಡೆದಿದ್ದರು. ಆ ಹಣವನ್ನು ಲಕ್ಷ್ಯ ಅವರು ಹೇಳಿದ ಸಮಯಕ್ಕೆ ನೀಡಿರಲಿಲ್ಲ. ವಿಕಾಸ್ ಅವರು ಕೇಳಿದಾಗಲೂ ಲಕ್ಷ್ಯ ಅವರು ತಲೆಕೆಡಿಸಿಕೊಂಡಿರಲ್ಲಿಲ್ಲ ಎನ್ನಲಾಗಿದೆ. ಜ. 22ರಂದು ವಿಕಾಸ್ ಹಾಗೂ ಅಭಿಷೇಕ್ ಅವರೊಂದಿಗೆ ಮದುವೆಯೊಂದಕ್ಕೆ ಲಕ್ಷ್ಯ ಅವರು ತೆರಳಿ ವಾಪಾಸ್ ಆಗುತ್ತಿದ್ದ ವೇಳೆ ಪ್ಲಾನ್ ಮಾಡಿ ಪಾಣಿಪತ್ ಮುನಕ್ ಕಾಲುವೆ ಬಳಿ ಕಾರು ನಿಲ್ಲಿಸಿದ್ದಾರೆ. ಬಳಿಕ ಇಬ್ಬರೂ ಸೇರಿ ಲಕ್ಷ್ಯ ಅವರ ಮೇಲೆ ಹಲ್ಲೆ ನಡೆಸಿ ಹತ್ಯೆಗೈದು ಅದೇ ಕಾಲುವೆಗೆ ಎಸೆದಿದ್ದಾರೆ ಎಂದು ತಿಳಿದುಬಂದಿದೆ.

ಬಳಿಕ ಲಕ್ಷ್ಯ ಅವರು ನಾಪತ್ತೆಯಾಗಿರುವ ಬಗ್ಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗುತ್ತದೆ. ಈ ವಿಷಯ ತಿಳಿಯುತ್ತಿದ್ದಂತೆ ವಿಕಾಸ್ ಪರಾರಿಯಾಗಿದ್ದಾನೆ. ಅಭಿಷೇಕ್ ಎಂಬಾತನನ್ನು ವಶಕ್ಕೆ ಪಡೆದ ಪೊಲೀಸರು ಆತನನ್ನು ವಿಚಾರಣೆ ನಡೆಸಿದ ವೇಳೆ ಹತ್ಯೆಯ ವಿಚಾರ ಬೆಳಕಿಗೆ ಬಂದಿದೆ. ಇನ್ನು ಲಕ್ಷ್ಯನ ಮೃತದೇಹ ಪತ್ತೆಗೆ ಹಾಗೂ ಪರಾರಿಯಾದ ವಿಕಾಸ್ ಗಾಗಿ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ.