ದೈವಾರಾಧನೆ ಬಗ್ಗೆ ಅಶ್ಲೀಲ ಪೋಸ್ಟ್ : ಬೆಂಗಳೂರು ಮೂಲದ ವ್ಯಕ್ತಿಯ ಬಂಧನ
ಮಂಗಳೂರು : ತುಳುನಾಡಿನ ದೈವಾರಾಧನೆ ನಿಂದನೆ ಮತ್ತು ಮಹಿಳೆಯರ ಬಗ್ಗೆ ಆಶ್ಲೀಲ ಚಿತ್ರಗಳನ್ನು ಪೋಸ್ಟ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯೋರ್ವನನ್ನು ಸೆನ್ ಕ್ರೈಂ ಠಾಣಾ ಪೋಲಿಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಬೆಂಗಳೂರು ಉತ್ತರ ಮೂಲದ ಶಿವರಾಜ್ ಹೆಚ್.ಕೆ (37) ಎಂದು ಗುರುತಿಸಲಾಗಿದೆ. ಟ್ವಿಟರ್ ನಲ್ಲಿ ನಕಲಿ ಖಾತೆಯ ಮೂಲಕ ತುಳುನಾಡಿನ ದೈವಾರಾಧನೆ ನಿಂದನೆ ಮತ್ತು ಮಹಿಳೆಯರ ಬಗ್ಗೆ ಅಶ್ಲೀಲ ಚಿತ್ರಗಳನ್ನು ಪೋಸ್ಟ್ ಮಾಡಿದ ಬಗ್ಗೆ ತುಳುನಾಡಿನ ದೈವಾರಾಧನೆ ಸಂರಕ್ಷಣಾ ಯುವ ವೇದಿಕೆ ಸಂಘಟನೆ ಸೆನ್ ಕ್ರೈಂ ಪೋಲಿಸರಿಗೆ ದೂರು ನೀಡಿತ್ತು.
ಸಂಘಟನೆಯು ನೀಡಿದ ದೂರಿನಂತೆ ಸೆನ್ ಕ್ರೈಂ ಪೊಲೀಸ್ ಠಾಣೆಯಲ್ಲಿ, ಅಕ್ರ: 100/2022 ಕಲಂ 67 ಐಟಿ ಮತ್ತು 153(ಎ),505(2) ಐಪಿಸಿ ರಂತೆ ಪ್ರಕರಣ ದಾಖಲಾಗಿತ್ತು. ಮಂಗಳೂರು ನಗರ ಪೊಲೀಸ್ ಆಯುಕ್ತ ಕುಲದೀಪ್ ಕುಮಾರ್ ಆರ್ ಜೈನ್ ಅವರ ಮಾರ್ಗದರ್ಶನದಂತೆ ಸಿಸಿಬಿ ಘಟಕದ ಎಸಿಪಿ ಪಿ.ಎ. ಹೆಗ್ಡೆ ಅವರ ನೇತೃತ್ವದ ಮಂಗಳೂರು ನಗರ ಸೆನ್ ಕ್ರೈಂ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಸತೀಶ್ ಎಂ.ಪಿ. ಹಾಗೂ ಸಿಬ್ಬಂದಿಯವರು ಪತ್ತೆ ಕಾರ್ಯದಲ್ಲಿ ಭಾಗವಹಿಸಿದ್ದರು.