Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

‘ನರೇಗಾ ಯೋಜನೆಯಲ್ಲಿ ಮಾನವ ದಿನಗಳ ಹೆಚ್ಚಳಕ್ಕೆ ಕೇಂದ್ರಕ್ಕೆ ಮನವಿ’ : ಡಿಸಿಎಂ

ಬೆಂಗಳೂರು: “ಬರಗಾಲವಿರುವ ಕಾರಣ ನರೇಗಾ ಯೋಜನೆಯ ಮಾನವ ದಿನಗಳನ್ನು 100 ದಿನಗಳ ಬದಲು 150 ದಿನಗಳಿಗೆ ಏರಿಕೆ ಮಾಡಬೇಕು ಎಂದು ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ತಿಳಿಸಿದರು.

ಜಿಕೆವಿಕೆ ಆವರಣದಲ್ಲಿ ನಡೆದ ಕೃಷಿಮೇಳದಲ್ಲಿ ಮಾತನಾಡಿದ ಅವರು,“ಹೊಸದಾಗಿ ಬಿಜೆಪಿ ಸೇರಿರುವ ʼರೈತರ ಮಕ್ಕಳುʼ ಹಾಗೂ ರಾಜ್ಯದ ಎಲ್ಲಾ ಸಂಸದರ ಬಳಿ ನಾವು ಕೈ ಮುಗಿದು ಕೇಳುವುದೇನೆಂದರೆ, ರಾಜ್ಯದ 200ಕ್ಕೂ ಹೆಚ್ಚು ತಾಲೂಕುಗಳು ಬರಕ್ಕೆ ತುತ್ತಾಗಿವೆ. ನರೇಗಾ ಯೋಜನೆ ಪ್ರಕಾರ ಬರಗಾಲ ಬಂದಾಗ ಮಾನವ ದಿನಗಳನ್ನು ಹೆಚ್ಚು ಮಾಡಬೇಕು ಎನ್ನುವ ಕಾನೂನಿದೆ. ಇದನ್ನು ಕೇಂದ್ರ ಸರ್ಕಾರಕ್ಕೆ ನೆನಪಿಸಿ, ನಮ್ಮ ರೈತರ ಬದುಕನ್ನು ಹಸನು ಮಾಡಬೇಕು.

ಯುಪಿಎ ಸರ್ಕಾರ ಜಾರಿಗೆ ತಂದ ನರೇಗಾ ಯೋಜನೆಯ ಅಡಿ ಸರ್ಕಾರಿ ಜಮೀನುಗಳಲ್ಲಿ ಕೆಲಸ ಮಾಡುವ ಅವಕಾಶವಿತ್ತು. ನಾನು ಸೋನಿಯಾ ಗಾಂಧಿ ಮತ್ತು ಕೇಂದ್ರ ಗ್ರಾಮೀಣಾಭಿವೃದ್ದಿ ಸಚಿವರಾಗಿದ್ದ ಸಿ.ಪಿ.ಜೋಷಿ ಅವರನ್ನು ಭೇಟಿಯಾಗಿ, ರೈತರು ಸ್ವಾಭಿಮಾನಿಗಳು ಬೇರೆಯವರ ಜಮೀನುಗಳಿಗೆ ಹೋಗಿ ಕೆಲಸ ಮಾಡಲು ಹಿಂದೇಟು ಹಾಕುತ್ತಾರೆ ಎಂದು ತಿಳಿಸಿದೆ. ಇದಾದ ನಂತರ ತಮ್ಮದೇ ಜಮೀನಿನಲ್ಲಿ ಕೆಲಸ ಮಾಡಿದರೇ ಸರ್ಕಾರವೇ ಕೂಲಿ ನೀಡುವಂತಹ ಅವಕಾಶ ಮಾಡಿಕೊಡಲಾಯಿತು.

ತಮ್ಮ ಜಮೀನಿನಲ್ಲಿ ಕೃಷಿ ಹೊಂಡ ಸೇರಿದಂತೆ ಇತರೇ ಕೆಲಸಗಳನ್ನು ಕುಟುಂಬದವರೇ ಮಾಡಿಕೊಂಡು ಸರ್ಕಾರದಿಂದ ಹಣ ಪಡೆಯಬಹುದು. ರೈತರು ನರೇಗಾ ಯೋಜನೆಯ ಉಪಯೋಗ ಪಡೆದುಕೊಳ್ಳಬೇಕು.

ರೈತರು ಏನೇ ಒತ್ತಡ ಬಂದರೂ ತಮ್ಮ ಜಮೀನುಗಳನ್ನು ಮಾರಾಟ ಮಾಡಿಕೊಳ್ಳಲು ಹೋಗಬೇಡಿ. ಇದು ವೈಯಕ್ತಿಕವಾದ ಮನವಿಯಲ್ಲ, ಸರ್ಕಾರದ ಮನವಿ. ಕೊರೋನಾ ಸಮಯದಲ್ಲಿ ನಗರಗಳಿಂದ ಹಳ್ಳಿಗಳಿಗೆ ಬಂದಿರುವ ಜನರು ಜಮೀನು ಕೊಂಡು, ಫಾರ್ಮ್ಹೌಸ್ ಕಟ್ಟಿಕೊಳ್ಳುತ್ತಿರುವವರು ದಡ್ಡರೇ? ಒಳ್ಳೆಯ ಆರೋಗ್ಯ ಬೇಕು ಎಂದು ಹಳ್ಳಿಗಳಿಗೆ ಬರುತ್ತಿದ್ದಾರೆ.

ಕೃಷಿ ವಿಶ್ವವಿದ್ಯಾಲಯಗಳು ರೈತರಿಗೆ ಆದಾಯ ತರುವಂತಹ ತಳಿಗಳ ಕುರಿತು ಹೆಚ್ಚು ಅಧ್ಯಯನ ನಡೆಸಬೇಕು. ಇದರಿಂದ ಅವರ ಬಾಳು ಹಸನಾಗುತ್ತದೆ. ಯಾರೂ ಸಹ ಭೂಮಿ ಮಾರಾಟ ಮಾಡಲು ಹೋಗುವುದಿಲ್ಲ. ನಮ್ಮ ಕರ್ನಾಟಕದಲ್ಲಿ ಬೆಳೆದ ಹೂವು, ಹಣ್ಣು ತರಕಾರಿಗಳು ಹೊರದೇಶಗಳಿಗೆ ರಫ್ತಾಗುತ್ತಿರುವುದು ಹೆಮ್ಮೆಯ ಸಂಗತಿ.

ನಮ್ಮ ರೈತರು ಇಡೀ ದೇಶಕ್ಕೆ ಮಾದರಿ

ನೀರಿನ ಸದ್ಬಳಕೆ ಮತ್ತು ಭೂಮಿಯ ಫಲವತ್ತತೆಯನ್ನು ಕಾಪಾಡುವ ಬಗ್ಗೆ ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಯ ರೈತರು ಇಡೀ ದೇಶಕ್ಕೆ ಮಾದರಿಯಾಗಿದ್ದಾರೆ ಎಂದರು