Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಮಂಗಳೂರು: ‘ಗೆಟ್ ಔಟ್ ಫ್ರಂ ಹಿಯರ್’- ಮುಖ್ಯ ಇಂಜಿನಿಯರ್ ಗೆ ಸಚಿವ ಭೈರತಿ ಗರಂ

ಮಂಗಳೂರು: ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮ ನಿಯಮಿತ (ಕೆಯುಐಡಿಎಫ್‌ಸಿ) ಮುಖ್ಯ ಇಂಜಿನಿಯರ್‌ ಅವರನ್ನು ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್‌ ಸಭೆಯಿಂದಲೇ ಹೊರಗೆ ಕಳುಹಿಸಿರುವ ಘಟನೆ ನಡೆದಿದೆ. ಮಂಗಳೂರು ಮನಪಾ ಸಭಾಂಗಣದಲ್ಲಿ ಶುಕ್ರವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಈ ವಿದ್ಯಮಾನ ನಡೆದಿದೆ. ಕೆಯುಐಡಿಎಫ್‌ಸಿ ಕಾಮಗಾರಿ ತೀವ್ರ ವಿಳಂಬಗತಿಯಲ್ಲಿ ನಡೆಯುತ್ತಿದೆ ಎಂಬ ವಿಚಾರದಲ್ಲಿ ಸಚಿವರು, ಕೆಯುಐಡಿಎಫ್‌ಸಿ ಮುಖ್ಯ ಇಂಜಿನಿಯರ್‌ ಜಯರಾಂ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಶೇ.60ರಷ್ಟು ಕಾಮಗಾರಿ ನಡೆಸಲು 4 ವರ್ಷ ಹಿಡಿದಿದೆ. ಇನ್ನುಳಿದ ಶೇ.40ರಷ್ಟು ಕಾಮಗಾರಿ ಇನ್ನು ನಾಲ್ಕೈದು ತಿಂಗಳಲ್ಲಿ ಸಂಪೂರ್ಣಗೊಳಿಸಲು ಆಗುತ್ತಾ? ಎಂದು ಸಚಿವರು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ಗುತ್ತಿಗೆದಾರರೊಂದಿಗೆ ಕೈಜೋಡಿಸಿದ್ದೀರಾ ಎಂದು ಇಂಜಿನಿಯರ್ ಮೇಲೆ ಫುಲ್ ಗರಂ ಆಗಿದ್ದಾರೆ‌. ಈ ವೇಳೆ ಇಂಜಿನಿಯರ್ ಜಯರಾಮ್‌, ‘ಹಾಗಾದರೆ ನಾನು ಕೆಲಸಕ್ಕೆ ರಿಸೈನ್ ಮಾಡ್ತೇನೆ’ ಎಂದಿದ್ದಾರೆ. ಇದರಿಂದ ಕೆಂಡಾಮಂಡಲವಾದ ಸಚಿವ ಭೈರತಿ ಸುರೇಶ್‌, ‘ಗೆಟ್ ಔಟ್ ಫ್ರಂ ಹಿಯರ್’ ಎಂದು ಕಿಡಿಕಾರಿದ್ದಾರೆ. ಆ ಬಳಿಕ ಅವರನ್ನು ಒಂದೂ ಮಾತನಾಡಲು ಬಿಡದೆ ಇಲ್ಲಿಂದ ಹೊರ ನಡೆಯಿರಿ ಅಂದಿದ್ದಾರೆ‌. ಕೊನೆಗೆ ಜಯರಾಂ ಸಭೆಯಿಂದ ಹೊರ ನಡೆದಿದ್ದಾರೆ. ಜಯರಾಮ್ ಕೆಯುಐಡಿಎಫ್‌ಸಿ ಮುಖ್ಯ ಇಂಜಿನಿಯರ್‌ ಆಗಿ ನಿವೃತ್ತರಾದ ಬಳಿಕ ಗುತ್ತಿಗೆ ಆಧಾರದಲ್ಲಿ ಮುಂದುವರಿದಿದ್ದರು ಎಂದು ಮೂಲಗಳಿಂದ ತಿಳಿದು ಬಂದಿದೆ.