Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಮಾದಾರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಪೀಠ ತ್ಯಜಿಸಲಿ: ಪ್ರೊ.ಸಿ.ಕೆ.ಮಹೇಶ್

 

ಚಿತ್ರದುರ್ಗ : ಬುದ್ದ, ಬಸವ, ಅಂಬೇಡ್ಕರ್ ವಿಚಾರಗಳಿಗೆ ತದ್ವಿರುದ್ದವಾಗಿ ನಡೆದುಕೊಳ್ಳುತ್ತಿರುವ ಮಾದಾರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಪೀಠ ತ್ಯಜಿಸಿ ಹೊರ ಬರಬೇಕು ಎಂದು ಸಾಮಾಜಿಕ ಸಂಘರ್ಷ ಸಮಿತಿ ರಾಜ್ಯಾಧ್ಯಕ್ಷ ಪ್ರೊ.ಸಿ.ಕೆ.ಮಹೇಶ್ ಎಚ್ಚರಿಕೆ ನೀಡಿದರು.

ಪ್ರವಾಸಿ ಮಂದಿರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಈ ಕುರಿತು ಮಾದಿಗರ ಸಾಂಸ್ಕøತಿಕ ಸಂಘ, ಜನಾಂಗದ ಸಾಂಸ್ಕøತಿಕ ನೆಲೆಗಳು-ಮುಕ್ತ ಸಂವಾದ ಮಾ. 10 ರಂದು ಬೆಳಿಗ್ಗೆ ಹನ್ನೊಂದು ಗಂಟೆಗೆ ಪತ್ರಕರ್ತರ ಭವನದಲ್ಲಿ ನಡೆಯಲಿದೆ ಎಂದು ಹೇಳಿದರು.

ಮಾದಿಗರ ಆಶಯಗಳಿಗೆ ವಿರುದ್ದವಾಗಿ ನಡೆದುಕೊಳ್ಳುತ್ತಿರುವ ಬಸವಮೂರ್ತಿ ಮಾದಾರ ಚನ್ನಯ್ಯಸ್ವಾಮೀಜಿ ಕಳೆದ ಹತ್ತಾರು ವರ್ಷಗಳಿಂದಲೂ ಮಠದಲ್ಲಿ ಆರ್.ಎಸ್.ಎಸ್. ಬೈಠೆಕ್ ನಡೆಸುತ್ತ, ಬ್ರಾಹ್ಮಣ್ಯ ಆಲೋಚನೆಗಳನ್ನು ಮೈಗೂಡಿಸಿಕೊಂಡು ಬುದ್ದನ, ವಚನಗಾರರ, ಮಾದಾರ ಚನ್ನಯ್ಯ, ಮರುಳಸಿದ್ದನ ಚಿಂತನೆಗಳಿಗೆ ಅಪಚಾರವೆಸಗುತ್ತಿದ್ದಾರೆ. ಮಾದಿಗರಿಗೂ ಮಠಕ್ಕೂ ಸಂಬಂಧವಿಲ್ಲವೆನ್ನುವಂತಾಗಿದೆ. ಮಾದಿಗರ ಮೇಲಾಗುವ ಅನ್ಯಾಯ, ದಬ್ಬಾಳಿಕೆ, ದೌರ್ಜನ್ಯ, ಅತ್ಯಾಚಾರ, ಹಲ್ಲೆ, ಬಹಿಷ್ಕಾರಗಳಿಗೆ ಒಂದು ದಿನವೂ ಬೀದಿಗೆ ಬಂದು ಹೋರಾಡಲಿಲ್ಲ. ಮಠ ಕೈಬಿಟ್ಟು ಜನಾಂಗವನ್ನು ರಕ್ಷಿಸಬೇಕಿದೆ. ಮೇಲ್ವರ್ಗದವರಿಗೆ ಕೇಂದ್ರ ಸರ್ಕಾರ ಶೇ.10 ರಷ್ಟು ಮೀಸಲಾತಿಯನ್ನು ಕೊಟ್ಟಾಗಲು ಹೊರಗೆ ಬಂದು ಮಾದಿಗರ ಪರವಾಗಿ ಚರ್ಚಿಸಲಿಲ್ಲ. ಆರ್ಥಿಕ, ಸಾಮಾಜಿಕ, ಶೈಕ್ಷಣಿಕ, ರಾಜಕೀಯವಾಗಿ ಹಿಂದುಳಿದಿರುವ ಮಾದಿಗ ಜನಾಂಗ ಅಪಾಯಕ್ಕೆ ತುತ್ತಾಗುವ ಸಂಭವವಿದೆ. ಸಾಂಸ್ಕøತಿಕ ನಡಿಗೆಗಳಿಗೆ ಪೂರಕವಾಗಿಲ್ಲದೆ ಗಟ್ಟಿಯಾಗಿ ಮಠದಲ್ಲಿ ಕುಳಿತುಕೊಳ್ಳುವ ಬದಲು ನಮ್ಮ ಜನಾಂಗದ ಪರವಾಗಿ ನಿಲ್ಲಬೇಕಿದೆ ಎಂದರು.

ಭ್ರಷ್ಠಾಚಾರ ವಿರೋಧಿ ಆಂದೋಲನ ರಾಜ್ಯಾಧ್ಯಕ್ಷ ಹನುಮಂತಪ್ಪ ದುರ್ಗ ಮಾತನಾಡುತ್ತ ಜನಾಂಗದ ಹೆಸರೇಳಿಕೊಂಡು ಪೀಠದಲ್ಲಿ ಕುಳಿತಿರುವ ಬಸವಮೂರ್ತಿ ಮಾದಾರ ಚನ್ನಯ್ಯಸ್ವಾಮೀಜಿ ಮಾದಿಗರ ಪರವಾಗಿಲ್ಲ. ಜಾತಿವಾದಿ, ಕೋಮುವಾದಿಗಳ ಜೊತೆ ಗುರುತಿಸಿಕೊಂಡಿರುವುದನ್ನು ನೋಡಿದರೆ ಇದು ಕೂಡ ನಾಗ್ಪುರ್ ರೀತಿಯ ಮಠವಾಗುವುದರಲ್ಲಿ ಸಂಶಯವಿಲ್ಲ. ಮೋಹನ್ಭಾಗವತ್ ಮಠದಲ್ಲಿ ಒಂದು ದಿನ ಉಳಿದುಕೊಂಡಿದ್ದರು. ಸ್ವಾಮೀಜಿ ಚುನಾವಣೆಗೆ ನಿಲ್ಲುವುದಾದರೆ ನಮ್ಮದೇನು ಅಭ್ಯಂತರವಿಲ್ಲ. ಆದರೆ ಮಠ ತ್ಯಜಿಸಲಿ. ಸಮಾಜದ ಹೆಸರಲ್ಲಿ ಪೀಠಾಧಿಪತಿಗಳಾಗಿ ಮುಂದುವರೆಯುವುದು ಬೇಡ ಎಂದು ಹೇಳಿದರು.

ನಿವೃತ್ತ ತಹಶೀಲ್ದಾರ್ ಹಿರೇಹಳ್ಳಿ ಮಲ್ಲಿಕಾರ್ಜುನ್ ಮಾತನಾಡಿ ಬುದ್ದ ಬಸವ ಶರಣರ ವಿಚಾರಗಳಿಗೆ ವಿರುದ್ದವಾಗಿರುವ ಮಾದಾರ ಚನ್ನಯ್ಯ ಗುರುಪೀಠ ಕಳೆದ ಹತ್ತು ವರ್ಷಗಳಿಂದ ದಾರಿ ತಪ್ಪಿ ನಡೆಯುತ್ತಿರುವುದು ಮಾದಿಗ ಜನಾಂಗದ ಮನಸ್ಸಿಗೆ ನೋವುಂಟು ಮಾಡಿದೆ. ಮಠದ ಸ್ವಾಮೀಜಿಯಾಗಿರುವ ಮಾದಾರ ಚನ್ನಯ್ಯ ಸ್ವಾಮೀಜಿ ಜನಾಂಗದ ಪರವಾಗಿರಬೇಕೆ ಹೊರತು ಜಾತಿವಾದಿಗಳ ಜೊತೆ ಗುರುತಿಸಿಕೊಂಡಿರುವುದು ಒಳ್ಳೆಯ ಬೆಳವಣಿಗೆಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸಾಮಾಜಿಕ ಸಂಘರ್ಷ ಸಮಿತಿ ಜಿಲ್ಲಾಧ್ಯಕ್ಷ ಕೆ.ಕುಮಾರ್ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.