Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಮುಕೇಶ್ ಅಂಬಾನಿಗೆ ಜೀವ ಬೆದರಿಕೆ- ಆರೋಪಿ ಬಂಧನ

ಮುಂಬೈ: ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಅವರಿಗೆ ಜೀವ ಬೆದರಿಕೆ ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ತೆಲಂಗಾಣ ಮೂಲದ ಆರೋಪಿ ಒಬ್ಬನನ್ನು ಮಹಾರಾಷ್ಟ್ರ ಪೊಲೀಸರು ಬಂಧಿಸಿದ್ದಾರೆ.

ಆರೋಪಿಯನ್ನು ಗಣೇಶ್ ರಮೇಶ್ ವನಪರ್ಡಿ (19) ಎಂದು ಗುರುತಿಸಲಾಗಿದೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ವಿಚಾರಣೆಗಾಗಿ ನ.8ರವರೆಗೆ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.

ಇ-ಮೇಲ್ ಐಡಿ ಶಾದಾಬ್ ಖಾನ್ ಎಂಬ ವ್ಯಕ್ತಿಗೆ ಸೇರಿದ್ದು, ಬೆಲ್ಜಿಯಂನಿಂದ ಇ-ಮೇಲ್ ಸಂದೇಶಗಳು ಬಂದಿವೆ ಎಂದು ತನಿಖೆಯಿಂದ ತಿಳಿದುಬಂದಿದೆ.ಇದು ವ್ಯಕ್ತಿಯ ಸರಿಯಾದ ಐಡಿಯೇ ಅಥವಾ ನಕಲಿ ಐಡಿ ಬಳಸಿ ಇ-ಮೇಲ್ ಗಳನ್ನು ಕಳುಹಿಸಲಾಗಿದೆಯೇ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಆರೋಪಿಯಿಂದ ಮೊದಲು 20 ಕೋಟಿ ರೂ. ನೀಡುವಂತೆ ಇ-ಮೇಲ್ ಬಂದಿತ್ತು. ಈ ವೇಳೆ ದೂರು ನೀಡಲಾಗಿತ್ತು. ಇದಾದ ಕೆಲವು ದಿನಗಳ ನಂತರ 200 ಹಾಗೂ 400 ಕೋಟಿ ರೂ. ಬೇಡಿಕೆಯ ಇ-ಮೇಲ್‍ ಗಳು ಬಂದಿದ್ದವು. ಹಣ ನೀಡದೇ ಇದ್ದರೆ ಗುಂಡಿಟ್ಟು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದ ಆರೋಪಿ.

ಅಂಬಾನಿ ಅವರಿಗೆ ಈ ಹಿಂದೆ ಕೂಡ ಕೊಲೆ ಬೆದರಿಕೆ ಬಂದಿತ್ತು. ಅಂಬಾನಿ ಮತ್ತು ಅವರ ಕುಟುಂಬ ಸದಸ್ಯರನ್ನು ಗುರಿಯಾಗಿಸಿಕೊಂಡು ಬೆದರಿಕೆ ಕರೆ ಮಾಡಿದ್ದಕ್ಕಾಗಿ ಮುಂಬೈ ಪೊಲೀಸರು ಕಳೆದ ವರ್ಷ ಬಿಹಾರದ ವ್ಯಕ್ತಿಯನ್ನು ಬಂಧಿಸಿದ್ದರು.