Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಯುಗಾದಿ ಹಬ್ಬದಂದು ಬೇವು ಬೆಲ್ಲದ ಮಹತ್ವ

ಯುಗಾದಿ ಎಂದರೆ ಹೊಸ ವರ್ಷದ ಆರಂಭ. ಕರ್ನಾಟಕ ಮತ್ತು ಆಂಧ್ರಪ್ರದೇಶದಲ್ಲಿ ವಿಶೇಷ ಆಚರಣೆಯ ಮೂಲಕ ಹೊಸ ವರ್ಷವನ್ನು ಸ್ವಾಗತಿಸುತ್ತಾರೆ. ಚೈತ್ರ ಮಾಸದ ಶುಕ್ಲ ಪಕ್ಷದ ಮೊದಲ ದಿನ ಯುಗದ ಆರಂಭವಾಗುವುದು. ಹಾಗಾಗಿಯೇ ಯುಗಾದಿ ಎನ್ನುವ ಹೆಸರಿನಲ್ಲಿ ಹೊಸ ವರ್ಷದ ಆರಂಭವಾಗುವುದು. ಈ ವರ್ಷ ಮಾರ್ಚ್ 22ರಂದು ಆಚರಿಸಲಾಗುವುದು. ಈ ಶೋಭಕೃತ ಸಂವತ್ಸರ ನಿಮ್ಮ ಬಾಳಿನಲ್ಲಿ ಸಮೃದ್ಧಿಯನ್ನು ತರಲಿ.

ಈ ಶುಭ ದಿನದಂದೇ ಬ್ರಹ್ಮ ದೇವನು ಸೃಷ್ಟಿಯನ್ನು ಆರಂಭಿಸಿದನು. ಈ ನೆನಪಿಗಾಗಿಯೇ ಯುಗಾದಿ ಹಬ್ಬದ ಆಚರಣೆಯನ್ನು ಆಚರಿಸಲಾಗುವುದು ಎಂದು ಸಹ ಹೇಳಲಾಗುವುದು. ಪ್ರಕೃತಿಯಲ್ಲಿಯೂ ವಿಭಿನ್ನ ಬದಲಾವಣೆಯ ಮೂಲಕ ಹೊಸ ವರ್ಷದ ಆರಂಭವಾಗುವುದು. ಇದು ವ್ಯಕ್ತಿಯ ಜೀವನದ ಮೇಲೂ ಸಾಕಷ್ಟು ಪ್ರಭಾವ ಬೀರುತ್ತದೆ.

ಹಿಂದೂ ಹಬ್ಬಗಳಲ್ಲಿ ಒಂದಾದ ಯುಗಾದಿಯನ್ನು ವಿವಿಧ ಪ್ರದೇಶಗಳಲ್ಲಿ ವಿಭಿನ್ನ ಹೆಸರು ಹಾಗೂ ಸಂಪ್ರದಾಯಗಳ ಅಡಿಯಲ್ಲಿ ಆಚರಿಸಲಾಗುವುದು. ಕರ್ನಾಟಕದಲ್ಲಿ ಯುಗಾದಿಯ ಆಚರಣೆಯನ್ನು ವಿಶೇಷವಾದ ಸಡಗರ ಸಂಭ್ರಮದಿಂದ ಆಚರಿಸಲಾಗುವುದು. ಈ ಸಂಭ್ರಮದ ಒಳಗೆ ವಿವಿಧ ಸಾಂಪ್ರದಾಯಿಕ ಆಚರಣೆಯನ್ನು ಆಚರಿಸಲಾಗುವುದು. ಬೇವು ಬೆಲ್ಲವನ್ನು ನೀಡುವುದು ಹಾಗೂ ಸವಿಯುವುದು ಈ ಹಬ್ಬದ ವಿಶೇಷ ಸಂಗತಿ. ಪ್ರತಿಯೊಬ್ಬರ ಜೀವನವು ನೋವು-ನಲಿವಿನಿಂದ ಕೂಡಿರುತ್ತದೆ. ಅವುಗಳನ್ನು ಸಮಾನ ದೃಷ್ಟಿಯಲ್ಲಿ ಸ್ವೀಕರಿಸಬೇಕು. ನೋವು ಎದುರಾದಾಗ ದೃತಿಗೆಡದೆ, ನಲಿವಿನಿಂದಾಗಿ ಅಹಂಕಾರಕ್ಕೆ ಒಳಗಾಗದೆ, ಎರಡು ಸಂದರ್ಭದಲ್ಲೂ ಸಮತೋಲನವನ್ನು ಕಾಯ್ದುಕೊಂಡು ಜೀವನವನ್ನು ನಡೆಸಬೇಕು. ಅಂತೆಯೇ ಒಂದು ವರ್ಷ ಎಂದರೆ 365 ದಿನಗಳು ಈ ದಿನಗಳಲ್ಲಿ ಸಂಪೂರ್ಣವಾಗಿ ಸಂತೋಷದಿಂದ ಹಾಗೂ ಕೇವಲ ದುಃಖದಿಂದಲೇ ಕೂಡಿರುವುದಿಲ್ಲ. ಸುಖ-ದುಃಖ ಎರದು ಚಕ್ರದ ರೀತಿಯಲ್ಲಿ ತಿರುಗುತ್ತಿರುತ್ತದೆ. ಆಗ ಎಲ್ಲವನ್ನೂ ಸಮನಾಗಿ ಸ್ವೀಕರಿಸುತ್ತಾ ಸಾಗಬೇಕು ಎನ್ನುವುದೇ ಯುಗಾದಿ ಹಬ್ಬದ ಒಳಾರ್ಥ.

ಬೇವು-ಬೆಲ್ಲದ ಹಂಚಿಕೆ ಯುಗಾದಿಯ ಸಮಯ ಬರುವ ಒಳಗೆ ಪ್ರಕೃತಿಯಲ್ಲಿ ಗಿಡ-ಮರಗಳು ತಮ್ಮ ಹಳೆಯ ಎಲೆಗಳನ್ನು ಕೊಡವಿಕೊಂಡು, ಹೊಸ ಚಿಗುರುಗಳಿಂದ ಕಂಗೊಳಿಸುತ್ತವೆ. ಅಂತೆಯೇ ನಮ್ಮ ಜೀವನದಲ್ಲೂ ಹೊಸತನವನ್ನು ಪಡೆದುಕೊಳ್ಳಲು ಹೊಸ ವರ್ಷವನ್ನು ಸ್ವಾಗತಿಸಲಾಗುವುದು. ಈ ವಿಶೇಷ ಹಬ್ಬದ ಸಂದರ್ಭದಲ್ಲಿ ಭೌಗೋಳಿಕವಾಗಿಯೂ ಮಹತ್ತರ ಮದಲಾವಣೆ ಉಂಟಾಗುತ್ತದೆ. ಚಂದ್ರನು ಸೂರ್ಯನಿಗೆ ಸ್ವಲ್ಪ ಸಮೀಪ ಚಲಿಸುತ್ತಾನೆ. ಹಾಗಾಗಿ ಚಂದ್ರನನ್ನು ವೀಕ್ಷಿಸಲು ಸ್ವಲ್ಪ ಕಷ್ಟವಾಗುವುದು ಎನ್ನುತ್ತಾರೆ. ಧಾರ್ಮಿಕ, ನೈಸರ್ಗಿಕ ಹಾಗೂ ಭೌಗೋಳಿಕವಾಗಿ ವಿಭಿನ್ನ ಬದಲಾವಣೆಯನ್ನು ಸೂಚಿಸುತ್ತಾ ಹೊಸ ಯುಗವನ್ನು ತರುವ ಹಬ್ಬ ಯುಗಾದಿ. ಈ ಹಬ್ಬದಂದು ಅಭ್ಯಂಗ ಸ್ನಾನ, ಗೃಹಾಲಂಕಾರ, ಬೇವು-ಬೆಲ್ಲದ ಹಂಚಿಕೆ, ವಿಶೇಷವಾದ ದೇವರ ಪೂಜೆ, ವಿಶೇಷ ನೈವೇದ್ಯಗಳನ್ನು ತಯಾರಿಸುವುದರ ಮೂಲಕ ಹಬ್ಬದ ಸೊಗಡನ್ನು ಸವಿಯುತ್ತಾರೆ.

ಬೇವಿನ ಎಲೆ ದುಃಖ/ನೋವನ್ನು ಸೂಚಿಸುತ್ತದೆ ಯುಗಾದಿ ಎನ್ನುವ ಹಬ್ಬದ ಸಂಕೇತವೇ ಬೇವು-ಬೆಲ್ಲ. ಪವಿತ್ರ ಅರ್ಥ ಹಾಗೂ ಆಚರಣೆಯನ್ನು ಹೊಂದಿರುವ ಈ ಹಬ್ಬದಲ್ಲಿ ಬೇವು ವಿಶೇಷವಾದ ಸ್ಥಾನವನ್ನು ಪಡೆದುಕೊಂಡಿದೆ. ಅತ್ಯಂತ ಆರೋಗ್ಯಕರ ಔಷಧೀಯ ಸಸ್ಯ. ಇದರ ಎಲೆಗಳು ಅನೇಕ ರೋಗಗಳನ್ನು ದೂರ ಇರಿಸುತ್ತದೆ. ಧಾರ್ಮಿಕವಾಗಿ ಹಾಗೂ ಭಾವನಾತ್ಮಕವಾಗಿಯೂ ಅದ್ಭುತ ಮಾಹಿತಿಯನ್ನು ನೀಡುವುದು. ಮನುಷ್ಯನ ಜೀವನ ಕೇವಲ ಸಂತೋಷದ ಸವಾರಿಯಿಂದ ಕೂಡಿರುವುದಿಲ್ಲ. ದುಃಖ ಹಾಗೂ ನೋವು ಎನ್ನುವುದು ಬೆಸೆದುಕೊಮಡಿರುತ್ತದೆ. ಹಾಗಾಗಿ ವ್ಯಕ್ತಿ ತನ್ನ ಸುತ್ತಲಲ್ಲಿ ಇರುವ ನೋವು ಹಾಗೂ ಕಷ್ಟವನ್ನು ಸರಿಯಾಗಿ ಸ್ವೀಕರಿಸಬೇಕು. ಜೀವನದ ಕಹಿಯನ್ನು ಒಪ್ಪಿಕೊಳ್ಳಬೇಕು. ಆಗಲೇ ಅಹಂಕಾರವನ್ನು ಮೆಟ್ಟಿ ನಿಲ್ಲಲು ಸಾಧ್ಯ. ಜೊತೆಗೆ ಜೀವನದ ಪರಿಪೂರ್ಣತೆಯನ್ನು ತಿಳಿದುಕೊಳ್ಳಬಹುದು ಎನ್ನುವ ಭಾವನೆಯನ್ನು ಸೂಚಿಸುತ್ತದೆ.

ಬೆಲ್ಲ ಸಿಹಿಯನ್ನು ಸೂಚಿಸುತ್ತದೆ ಬೆಲ್ಲದ ಸಾಮಾನ್ಯವಾದ ಗುಣ ಹಾಗೂ ಎಲ್ಲರಿಗೂ ಇಷ್ಟವಾಗುವ ಸಂಗತಿ ಸಿಹಿ. ಬೆಲ್ಲದ ಸಿಹಿಯು ಸಂತೋಷ ಅಥವಾ ಆನಂದದ ಭಾವನೆಯನ್ನು ಸೂಚಿಸುವುದು. ಮನುಷ್ಯ ತನ್ನ ಜೀವನದಲ್ಲಿ ಸಿಹಿಯನ್ನು ಪಡೆದುಕೊಳ್ಳಲು ಅಥವಾ ಸಂತೋಷವನ್ನು ಅನುಭವಿಸಲು ಸಾಕಷ್ಟು ಪ್ರಯತ್ನ ಹಾಗೂ ಶ್ರಮವನ್ನು ವಹಿಸುತ್ತಾನೆ. ಯುಗಾದಿ ಹಬ್ಬವು ಸಹ ಬೆಲ್ಲವನ್ನು ನೀಡುವ ಸಂದೇಶವನ್ನು ಸಾರುವುದು. ಜೀವನದಲ್ಲಿ ಹೊಸತನದ ಬದಲಾವಣೆಯನ್ನು ತಂದುಕೊಳ್ಳುವುದರ ಮೂಲಕ ಆನಂದವನ್ನು ಅನುಭವಿಸಲಿ ಎನ್ನುವ ಧಾರ್ಮಿಕ ಒಳಾರ್ಥ ಹಾಗೂ ಭಾವನೆಯನ್ನು ಸೂಚಿಸುವುದು. ಜೀವನದಲ್ಲಿ ಬರುವ ಎಲ್ಲಾ ಸಂಗತಿಗಳನ್ನು ಬೆಲ್ಲದ ರೀತಿಯಲ್ಲಿಯೇ ಸ್ವೀಕರಿಸಿ ಅನುವಿಸಬೇಕು ಎನ್ನುವ ಅರ್ಥವನ್ನು ನೀಡುವುದು.