Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

‘ರಾಹುಲ್ ಗಾಂಧಿ ಅವರಿಗೆ ಲೋಕಸಭೆ ಚುನಾವಣೆ ಸೋಲಿ‌ನ‌ ಕನಸು ಬೀಳುತ್ತಿದೆ’ -ಜೋಶಿ

ಹುಬ್ಬಳ್ಳಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಲೋಕಸಭೆ ಚುನಾವಣೆ ಸೋಲಿ‌ನ‌ ಕನಸು ಬೀಳುತ್ತಿದೆ ಎಂದು ಕೇಂದ್ರ ಸಚಿವ, ಧಾರವಾಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರಹ್ಲಾದ್ ಜೋಶಿ ವಾಗ್ದಾಳಿ ಮಾಡಿದರು.

ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮಮತಾ ಬ್ಯಾನರ್ಜಿ ಕೇವಲ 40 ಕ್ಷೇತ್ರ ಗೆಲ್ಲುತ್ತೇವೆ ಅಂತ ಹೇಳುತ್ತಾರೆ. ಕಾಂಗ್ರೆಸ್​ ನಾಯಕರಿಗೂ ಸೋಲುತ್ತೇವೆ ಅಂತ ಅರ್ಥ ಆಗಿದೆ. ಹೀಗಾಗಿ ಚುನಾವಣಾ ಆಯೋಗ, ಇವಿಎಂ ಮೇಲೆ ಅನುಮಾನಪಡುತ್ತಾರೆ ಎಂದು ಕಿಡಿಕಾರಿದರು.

ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಗೆದ್ದಾಗ ಇವಿಎಂ ಸಮಸ್ಯೆ ಇರಲಿಲ್ಲ. ಆದರೆ ನಾವು ಗೆದ್ದರೆ ಮಾತ್ರ ಇವಿಎಂ ಸಮಸ್ಯೆ ಇದೆ ಅಂತ ಕಾಂಗ್ರೆಸ್​ನವರು ಹೇಳುತ್ತಾರೆ. ಕಾಂಗ್ರೆಸ್ಸಿನವರು ಸೋಲಿನ ಭಯದಿಂದ ಹತಾಶರಾಗಿ ಮಾತನಾಡುತ್ತಿದ್ದಾರೆ. ಮೋದಿ ಅವರ ನೇತೃತ್ವದಲ್ಲಿ ಬಹಳ ಬದಲಾವಣೆಯಾಗಿದೆ. ಬಿಜೆಪಿಯನ್ನು ಗೆಲ್ಲಿಸಬೇಕೆಂದು ಜನ‌ ತೀರ್ಮಾನ ಮಾಡಿದ್ದಾರೆ ಎಂದು ಹೇಳಿದರು.

ಬಿಜೆಪಿ, ಆರ್​​ಎಸ್​ಎಸ್​ ವಿಷವಿದ್ದಂತೆ, ಅದರ ರುಚಿ ನೋಡಬೇಡಿ ಎಂಬ ಕಾಂಗ್ರೆಸ್​ ಮುಖಂಡ ಮಲ್ಲಿಕಾರ್ಜುನ್​ ಖರ್ಗೆ ಹೇಳಿಕೆ ವಿಚಾರವಾಗಿ ಮಾತನಾಡಿದ ಜೋಶಿ, ಮಲ್ಲಿಕಾರ್ಜುನ ಖರ್ಗೆ ಬಾಲಿಶ ಹೇಳಿಕೆ ನೀಡುತ್ತಿದ್ದಾರೆ ಎಂದರು.