Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಲೈಂಗಿಕ ದೌರ್ಜನ್ಯ ನಡೆಸಿದವನಿಗೆ 189 ವರ್ಷ ಜೈಲುವಾಸ!: ಹೊಸದುರ್ಗ ಕೋರ್ಟ್ ಮಹತ್ವದ ತೀರ್ಪು

ಕಾಸರಗೋಡು: ಏಳು ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ಹಾಗೂ ಆಕೆಯ ಇಬ್ಬರು ಸಹೋದರರಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದ ಆರೋಪಿಗೆ ಹೊಸದುರ್ಗ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸಿ ಸುರೇಶ್ ಕುಮಾರ್ ಅವರು ಪೋಕ್ಸೋ ಸೇರಿದಂತೆ ವಿವಿಧ ಸೆಕ್ಷನ್ ಗಳ ಅಡಿಯಲ್ಲಿ ಒಟ್ಟು 189 ವರ್ಷಗಳ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.

ಬಳಾಲ್ ಗ್ರಾಮ ಪಂಚಾಯಿತ್ ನ ಅರಿಂಜಾಲ್ ನಿವಾಸಿ ಸುಧೀಶ್ ಯಾನೆ ಪಪ್ಪು(25) ಎಂಬಾತನೇ ಶಿಕ್ಷೆಗೊಳಗಾದ ಅಪರಾಧಿ. ಲೈಂಗಿಕ ದೌರ್ಜನ್ಯ, ಅಪಹರಣ ಮತ್ತು ಬೆದರಿಕೆ ಸೇರಿದಂತೆ ಒಟ್ಟು 21 ಪ್ರಕರಣದಡಿ ಈ ಶಿಕ್ಷೆ ವಿಧಿಸಲಾಗಿದೆ. ಎಲ್ಲ ಪ್ರಕರಣಗಳು ಏಕಕಾಲದಲ್ಲಿ ನಡೆದಿರುವುದರಿಂದ ಆರೋಪಿಯು ಒಟ್ಟಾರೆ 20 ವರ್ಷ ಗಳ ಜೈಲು ಶಿಕ್ಷೆಯನ್ನು ಅನುಭವಿಸಬೇಕಾಗುತ್ತದೆ ಎಂದು ನ್ಯಾಯಾಧೀಶರು ತಿಳಿಸಿದ್ದಾರೆ.

ಶಿಕ್ಷೆಯ ಹೊರತಾಗಿ ಆರೋಪಿಗೆ ಮೂರು ಪ್ರಕರಣಗಳಲ್ಲಿ 4.05 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ. ದಂಡ ಪಾವತಿಸಲು ವಿಫಲವಾದರೆ ಮತ್ತೆ 2 ವರ್ಷ ಹೆಚ್ಚುವರಿ ಸಜೆ ಅನುಭವಿಸಬೇಕು ಎಂದು ತೀರ್ಪಿನಲ್ಲಿ ಹೇಳಿದ್ದಾರೆ.

ಏನಿದು ಪ್ರಕರಣ?
2022ರಲ್ಲಿ ಏಳು ವರ್ಷದ ಬಾಲಕಿ ಹಾಗೂ ಆಕೆಯ 14 ವರ್ಷದ ಹಿರಿಯ ಸಹೋದರನಿಗೂ, 2019ರಲ್ಲಿ ಇನ್ನೊಬ್ಬ ಸಹೋದರನಿಗೆ ಕಿರುಕುಳ ನೀಡಿರುವ ಬಗ್ಗೆ ನ್ಯಾಯಾಲಯಕ್ಕೆ ಸಲ್ಲಿಸಿದ ಚಾರ್ಜ್ ಶೀಟ್ ನಲ್ಲಿ ತಿಳಿಸಲಾಗಿದೆ.

ಈ ಪೈಕಿ ಬಾಲಕಿಯನ್ನು ಮನೆ ಮತ್ತು ಸಮೀಪದ ಅರಣ್ಯ ಪ್ರದೇಶ ಮತ್ತು ಸಮುದಾಯ ಕುಡಿಯುವ ನೀರಿನ ಯೋಜನೆಯ ಪಂಪ್ ಹೌಸ್ ಗೆ ಕರೆದೊಯ್ದು ಹಲವು ಬಾರಿ ಲೈಂಗಿಕ ಕಿರುಕುಳ ನೀಡಿದ್ದಾನೆ. ಇದಕ್ಕಾಗಿ ಆತನಿಗೆ 74 ವರ್ಷಗಳ ಜೈಲುಶಿಕ್ಷೆ ಮತ್ತು 1.45 ಲಕ್ಷ ದಂಡ ವಿಧಿಸಲಾಗಿದೆ. ಇನ್ನು 12 ವರ್ಷದ ಒಳಗಿನ ಬಾಲಕಿಗೆ ಸೆಕ್ಷನ್ 5(i)(m) ಮತ್ತು (n) ಅಡಿ ತಲಾ 20 ವರ್ಷಗಳ ಜೈಲು ಮತ್ತು ಪೋಕ್ಸೋ ಕಾಯ್ದೆಯಡಿ ತಲಾ 40 ಸಾವಿರ ದಂಡ ವಿಧಿಸಲಾಗಿದೆ. ಇನ್ನು ಬಾಲಕಿಯನ್ನು ಅಪಹರಣ ಮಾಡಿರುವುದಕ್ಕಾಗಿ ಐಪಿಸಿ ಸೆಕ್ಷನ್ 363ರ ಅಡಿ 3 ವರ್ಷಗಳ ಜೈಲು ಶಿಕ್ಷೆ ಮತ್ತು 5 ಸಾವಿರ ದಂಡ ವಿಧಿಸಲಾಗಿದೆ.

ಇನ್ನು ಸೆಕ್ಷನ್ 370(4) ರ ಪ್ರಕಾರ ಅಪ್ರಾಪ್ತ ವಯಸ್ಕಳನ್ನು ಸಾಗಣೆ ಮಾಡಿದ ಅಪರಾಧದ ಅಡಿ 10 ವರ್ಷ ಜೈಲು ಶಿಕ್ಷೆ, 20 ಸಾವಿರ ದಂಡ ವಿಧಿಸಲಾಗಿದೆ. ಇನ್ನು ಇಬ್ಬರು ಬಾಲಕರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳಿಗೆ ಸಂಬಂಧಿಸಿ ವಿವಿಧ ಶಿಕ್ಷೆಗಳನ್ನು ವಿಧಿಸಲಾಗಿದ್ದು ಒಟ್ಟು 189 ವರ್ಷಗಳ ಜೈಲುವಾಸ ಆಗುತ್ತದೆ. ಆದರೆ ಅಪರಾಧಿ ಈಗ ಕೇವಲ 20 ವರ್ಷಗಳ ಜೈಲುವಾಸ ಅನುಭವಿಸಬೇಕಾಗಿದೆ.

ಈ ಬಗ್ಗೆ ಯಾರಿಗೂ ತಿಳಿದಿರಲಿಲ್ಲ ಆದರೆ ಮಕ್ಕಳ ವಿಚಾರದಲ್ಲಿ ಅಪರಾಧಿಯ ನಡವಳಿಕೆ ಸರಿಯಿಲ್ಲ ಎಂಬುದನ್ನು ಗಮನಿಸಿದ ನೆರೆಮನೆ ನಿವಾಸಿಯೊಬ್ಬರು ಶಾಲೆ ಶಿಕ್ಷಕರಿಗೆ ಮಾಹಿತಿ ನೀಡಿದ್ದರು. ಶಾಳಾ ಶಿಕ್ಷಕರು ಮಕ್ಕಳ ಸಹಾಯವಾಣಿಯಿಂದ ಆಪ್ತ ಸಹಾಯಕರನ್ನು ಕರೆಸಿ ಕೌನ್ಸಿಲಿಂಗ್ ಮಾಡಿಸಿದಾಗ ಈ ವಿಚಾರ ಬೆಳಕಿಗೆ ಬಂತು. ಬಾಲಕರು ವಿಷಯವನ್ನು ಕೌನ್ಸಿಲಿಂಗ್ ವೇಳ ಬಹಿರಂಗಪಡಿಸಿದರೂ ಬಾಲಕಿ ಮಾತ್ರ ನಿಜ ವಿಚಾರ ತಿಳಿಸಲು ಹಿಂಜರಿದಳು. ಆದರೆ ಪೊಲೀಸರ ವಿಚಾರಣೆ ನಡೆಸಿದಾಗ ನಡೆದ ಸಂಗತಿಯನ್ನು ವಿವರಿಸಿದಳು. ಘಟನೆ ಬಗ್ಗೆ ವೆಳ್ಳರಿಕುಂಡು ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು. ಪ್ರಾಸಿಕ್ಯೂಶನ್ ಪರವಾಗಿ ಸ್ಪಷಲ್ ಪಬ್ಲಿಕ್ ಪ್ರಾಸಿಕ್ಯೂಟರ್ ಎ ಗಂಗಾಧರನ್ ನ್ಯಾಯಾಲಯದಲ್ಲಿ ವಾದಿಸಿದ್ದರು.