Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಸಂಸತ್ತಿನಲ್ಲಿ ಸೋಲಿನ ಹತಾಶೆ ಪ್ರದರ್ಶಿಸದಿರಿ- ಪ್ರತಿಪಕ್ಷಗಳಿಗೆ ಮೋದಿ ಮನವಿ

ನವದೆಹಲಿ: ಸಂಸತ್ತಿನ ಚಳಿಗಾಲದ ಅಧಿವೇಶನ ಆರಂಭವಾಗಿದ್ದು, ವಿಧಾನಸಭೆ ಚುನಾವಣೆಗಳಲ್ಲಿ ಬಿಜೆಪಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಸದಸ್ಯರು ನರೇಂದ್ರ ಮೋದಿ ಅವರ ಪರವಾಗಿ ಘೋಷಣೆ ಕೂಗಿದ್ದಾರೆ.

ಇನ್ನು ಅಧಿವೇಶನ ಆರಂಭಕ್ಕೂ ಮುನ್ನ ನರೇಂದ್ರ ಮೋದಿ ಅವರು ವಿಧಾನಸಭೆ ಚುನಾವಣೆ ಫಲಿತಾಂಶದ ಕುರಿತು ಮಾತನಾಡಿ, ದೇಶದ ಜನ ನಕಾರಾತ್ಮಕತೆಯನ್ನು ತಿರಸ್ಕಾರ ಮಾಡಿದ್ದಾರೆ. ಇದರ ಹತಾಶೆಯನ್ನು ಪ್ರತಿಪಕ್ಷಗಳು ಸಂಸತ್ತಿನಲ್ಲಿ ಪ್ರದರ್ಶಿಸಬಾರದು. ಸುಗಮವಾಗಿ ಕಲಾಪಗಳು ನಡೆಯಲು ಅನುವು ಮಾಡಿಕೊಡಬೇಕು ಎಂದು ಮನವಿ ಮಾಡಿದರು.

ಸಂಸತ್ತಿನ ಎಲ್ಲ ಸದಸ್ಯರು ಪೂರ್ವ ತಯಾರಿ ಮಾಡಿಕೊಂಡು ಸಂಸತ್‌ ಕಲಾಪಗಳಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡುತ್ತೇನೆ. ಇನ್ನು ದೇಶದ ಜನ ಪ್ರತಿಪಕ್ಷಗಳ ನಕಾರಾತ್ಮಕತೆಯನ್ನು ತಿರಸ್ಕರಿಸಿದ್ದಾರೆ. ಪ್ರತಿಪಕ್ಷಗಳು ಕಳೆದ ಒಂಬತ್ತು ವರ್ಷಗಳಿಂದ ಹರಡುತ್ತಿರುವ ನಕಾರಾತ್ಮಕತೆಯನ್ನು ಬಿಟ್ಟು, ಸಕಾರಾತ್ಮಕ ಮನೋಭಾವ ಪ್ರದರ್ಶಿಸಲು ಇದು ಉತ್ತಮ ಅವಕಾಶ. ನೀವು ಸಂಸತ್ತಿನಲ್ಲಿ ಸೋಲಿನ ಹತಾಶೆಯನ್ನು ಪ್ರದರ್ಶಿಸಬಾರದು ಎಂದು ಹೇಳಿದರು.

ಪ್ರಜಾಪ್ರಭುತ್ವದಲ್ಲಿ ಪ್ರತಿಪಕ್ಷಗಳ ಪಾತ್ರವು ದೊಡ್ಡದಿದೆ. ಪ್ರತಿಪಕ್ಷಗಳು ಸಂಸತ್‌ ಅಧಿವೇಶನ ಯಶಸ್ವಿಯಾಗಲು ಸಹಕರಿಸಬೇಕು ಎಂದರು.