Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಸಮ ಸಮಾಜದ ಕನಸು ಕಂಡ ಪವಾಡ ಪುರುಷ ಶ್ರೀ ಗುರು ತಿಪ್ಪೇರುದ್ರಸ್ವಾಮಿಗಳು : ಶಾಸಕ ಬಿ. ದೇವೇಂದ್ರಪ್ಪ.

 

ಪಂಚಗಣಾಧೀಶ್ವರರಲ್ಲಿ ಒಬ್ಬರಾದ ಶ್ರೀ ಗುರು ತಿಪ್ಪೇರುದ್ರಸ್ವಾಮಿಗಳು ಧಾರ್ಮಿಕ ಪುರುಷರಾಗಿ ತತ್ವ ಬೋಧನೆಗಳಿಗಷ್ಟೇ ಸೀಮಿತವಾಗದೆ ಜನರ ಆರ್ಥಿಕ ಮತ್ತು ಸಾಮಾಜಿಕ ಜೀವನದ ಸಮಗ್ರ ಬದಲಾವಣೆಗಾಗಿ ಅಹರ್ನಿಶಿ ದುಡಿದವರಾಗಿದ್ದಾರೆ ಎಂದು ಶಾಸಕ ಬಿ. ದೇವೇಂದ್ರಪ್ಪನವರು ಹೇಳಿದರು.

ಅವರು ಎನ್.ಟಿ. ಯರ್ರಿಸ್ವಾಮಿ ಬರೆದ  ನಾಯಕನಹಟ್ಟಿ ಶ್ರೀ ಗುರುತಿಪ್ಪೇರುದ್ರಸ್ವಾಮಿ ಜೀವನ ಚರಿತ್ರೆ ಮತ್ತು ಕ್ಷೇತ್ರದರ್ಶನ’ ಪುಸ್ತಕ ಬಿಡುಗಡೆಮಾಡಿ ಮಾತನಾಡುತ್ತಿದ್ದru. ಶರಣರ ವಿಚಾರಗಳ ಹಿನ್ನೆಲೆಯಲ್ಲಿ ಸಮ ಸಮಾಜದ ಕನಸು ಕಂಡ ಅವರು ಪವಾಡಗಳ ಮೂಲಕ ಜನರನ್ನು ಸರಿದಾರಿಗೆ ತರಲು ಶ್ರಮಿಸಿದ್ದಾರೆ. ‘ಮಾಡಿದಷ್ಟು ನೀಡು ಭಿಕ್ಷೆ’ ಎನ್ನುವ ತತ್ವ ಸಿದ್ಧಾಂತದ ಮೂಲಕ ಜನರಲ್ಲಿ ಕಾಯಕ ತತ್ವವನ್ನು ಒಡಮೂಡಿಸಿದ ತಿಪ್ಪೇರುದ್ರಸ್ವಾಮಿಗಳು ಕೆರೆಗಳನ್ನು, ಪುರಗಳನ್ನು ಕಟ್ಟುವುದರ ಮೂಲಕ ಸಮ ಸಮಾಜದ ಅಭಿವೃದ್ಧಿಗೆ ಎಲ್ಲಾ ರೀತಿಯಿಂದಲೂ ತಮ್ಮದೇ ಆದ ಕೊಡುಗೆಯನ್ನು ನೀಡಿದ್ದಾರೆ ಎಂದರು.

ಸಾರ್ವಜನಿಕ ಗ್ರಂಥಾಲಯ ಇಲಾಖೆಯ ನಿರ್ದೇಶಕರಾದ ಶ್ರೀ ಸತೀಶ್‌ಕುಮಾರ್ ಹೊಸಮನಿಯವರು ಮಾತನಾಡಿ, ಪುಸ್ತಕಗಳು ದೇಹದ ಆತ್ಮವಿದ್ದಂತೆ. ಸಾಹಿತ್ಯದ ಓದು ಸಾಮಾಜಿಕ ಬದಲಾವಣೆಯನ್ನು ತರಬಲ್ಲುದು ಎಂಬುದನ್ನು ಸೋದಾಹರಣವಾಗಿ ತಿಳಿಸಿದರು. ಮತ್ತು ಧಾರ್ಮಿಕ ವಿಚಾರಗಳನ್ನು ಒಳಗೊಂಡಿರುವ ಎನ್.ಟಿ. ರ‍್ರಿಸ್ವಾಮಿಯವರ ಕೃತಿಯನ್ನು ಗ್ರಂಥಾಲಯಗಳಿಗೆ ತಲುಪಿಸುವ ವ್ಯವಸ್ಥೆ ಮಾಡಲಾಗುವುದು ಎಂದರಲ್ಲದೇ ಡಿಜಿಟಲ್ ಗ್ರಂಥಾಲಯಕ್ಕೆ ಇದನ್ನು ಅಳವಡಿಸುವ ಮೂಲಕ ಇಡೀ ಜಗತ್ತಿಗೆ ತಿಪ್ಪೇರುದ್ರಸ್ವಾಮಿಗಳ ಚರಿತ್ರೆಯನ್ನು ಪರಿಚಯಿಸಲಾಗುವುದು ಎಂದು ತಿಳಿಸಿದರು. ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಸನ್ಮಾನ್ಯ ಟಿ. ರಘುಮೂರ್ತಿಯವರು ಲೇಖಕರಾದ ಎನ್.ಟಿ. ರ‍್ರಿಸ್ವಾಮಿಯವರನ್ನು ಅಭಿನಂದಿಸಿ ಶುಭ ಹಾರೈಸಿದರು.

ಚಿತ್ರದುರ್ಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಕೆ.ಎಂ. ಶಿವಸ್ವಾಮಿಯವರು ಸಮಾರಂಭದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ಹಟ್ಟಿಮಲ್ಲಪ್ಪನಾಯಕ ಸಂಘದ ಅಧ್ಯಕ್ಷರಾದ ಶ್ರೀ ಜಿ.ಎಂ. ತಿಪ್ಪೇಸ್ವಾಮಿಯವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.

ಸಮಾರಂಭದಲ್ಲಿ ನಿವೃತ್ತ ಪ್ರಾಧ್ಯಾಪಕರಾದ ಶ್ರೀ ಎಂ. ಬಸವಪ್ಪನವರು, ಚಿತ್ರದುರ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಶ್ರೀ ದಿನೇಶ್ ಗೌಡಗೆರೆ, ಗೀತಾಂಜಲಿ ಪುಸ್ತಕ ಪ್ರಕಾಶನದ ಜಿ.ಬಿ.ಟಿ. ಮೋಹನ್, ವಿಧಾನಸಭೆ ಸಭಾಪತಿಗಳ ಆಪ್ತ ಕಾರ್ಯದರ್ಶಿಯಾಗಿದ್ದ ಶ್ರೀ ಸೊಕ್ಕೆ ತಿಪ್ಪೇಸ್ವಾಮಿಯವರು ಮಾತನಾಡಿದರು.

ವೇದಿಕೆಯಲ್ಲಿ ಲೇಖಕರಾದ ಶ್ರೀ ಎನ್.ಟಿ. ರ‍್ರಿಸ್ವಾಮಿಯವರು, ಶ್ರೀಮತಿ ಸಾವಿತ್ರಿ ರ‍್ರಿಸ್ವಾಮಿ, ಜಿ.ಎಸ್. ಚಿದಾನಂದ, ಬಿ. ಮಹೇಶ್ವರಪ್ಪ, ಬಿ. ಕಾಟಯ್ಯ, ಚೌಳೂರು ಲೋಕೇಶ್, ಕೆ. ಸುಜಾತ, ಗೀತಾಮಂಜು, ಜಿ.ವೈ. ತಿಪ್ಪೇಸ್ವಾಮಿ ಮುಂತಾದವರು ಉಪಸ್ಥಿತರಿದ್ದರು. ಜಗಳೂರು, ಚಳ್ಳಕೆರೆ, ಮೊಳಕಾಲ್ಮೂರು ತಾಲ್ಲೂಕುಗಳಿಂದ ಅಪಾರ ಸಂಖ್ಯೆಯ ಜನರು ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶುಭ ಕೋರಿದರು.