Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಸಿದ್ದರಾಮಯ್ಯ ಸಿಎಂ ಸ್ಥಾನ ಎಷ್ಟು ಕಾಲ ಇರುತ್ತದೋ ಗೊತ್ತಿಲ್ಲ..! – ‘ಕರ್ನಾಟಕ ಹಾಳು ಮಾಡಿದ ಕಾಂಗ್ರೆಸ್’ – ಪ್ರಧಾನಿ ಟೀಕೆ

ಭೋಪಾಲ್: ಮುಂದಿನ ಐದು ವರ್ಷಗಳ ಕಾಲ ನಾನೇ ಸಿಎಂ ಅಂತ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ ನೀಡಿದ ಬೆನ್ನಲ್ಲೇ ಅತ್ತ ಪ್ರಧಾನಿ ನರೇಂದ್ರ ಮೋದಿಯವರು ಕರ್ನಾಟಕದ ಸಿಎಂ ಸಿದ್ದರಾಮಯ್ಯ ಅದೆಷ್ಟು ದಿನಗಳವರೆಗೆ ಆ ಸ್ಥಾನದಲ್ಲಿರುತ್ತಾರೋ ಗೊತ್ತಿಲ್ಲ ಅಂತ ವ್ಯಂಗ್ಯವಾಡಿದ್ದಾರೆ. ಪಂಚ ರಾಜ್ಯಗಳ ಚುನಾವಣೆ ಪ್ರಚಾರ ನಿಮಿತ್ತ ಮಧ್ಯಪ್ರದೇಶದ ಖಾಂಡ್ವಾ ಜಿಲ್ಲೆಯಲ್ಲಿ ಭಾನುವಾರ ತಮ್ಮ ಭಾಷಣದಲ್ಲಿ ಕರ್ನಾಟಕವನ್ನು ಪ್ರಸ್ತಾಪಿಸಿದ ಅವರು, ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳಲ್ಲಿ ಆಡಳಿತ ವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ ಎಂದು ದೂರಿದರು. ಅಧಿಕಾರದ ಗದ್ದುಗೆ ಹಿಡಿಯಬೇಕೆಂಬ ಏಕೈಕ ಉದ್ದೇಶದಿಂದ ಕಾಂಗ್ರೆಸ್ ಹಲವು ಉಚಿತ ಯೋಜನೆಗಳ ಭರವಸೆ ನೀಡುತ್ತಿದೆ. ಇದರಿಂದ ಬಳಿಕ ಹಣ ಹೊಂದಿಸಲಾಗದೇ ಇತರ ಯೋಜನೆಗಳಿಗೆ ಕೊಡಲೆಪಟ್ಟು ಬೀಳುವಂತಾಗುತ್ತದೆ. ಈ ಮಾತಿಗೆ ಕರ್ನಾಟಕ ನಮ್ಮ ಕಣ್ಣ ಮುಂದೆಯೇ ಇದೆ. ಕರ್ನಾಟಕವೂ ಸೇರಿದಂತೆ ದೇಶದಲ್ಲಿ ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳನ್ನು ದೆಹಲಿಯಲ್ಲಿ ಕುಳಿತ “ಕೈ” ನಾಯಕರು ಎಟಿಎಂಗಳಂತೆ ಉಪಯೋಗಿಸಿಕೊಳ್ಳುತ್ತಿದ್ದಾರೆ. ಕರ್ನಾಟಕ ರಾಜ್ಯ, ಕಾಂಗ್ರೆಸ್ ಪಕ್ಷದ ಆಡಳಿತಕ್ಕೆ ಸಿಕ್ಕು ಅಭಿವೃದ್ಧಿ ಕುಂಠಿತಗೊಂಡು ಹಾಳಾಗುತ್ತಿದೆ ಅಂತಾ‌ ಪ್ರಧಾನಿ ನರೇಂದ್ರ ಮೋದಿ ಅವರು ಆರೋಪಿಸಿದರು ಎಂದು ಬಿಜೆಪಿ ಆಪ್ತ ಮೂಲಗಳು ತಿಳಿಸಿವೆ. ಮತ್ತೊಂದೆಡೆ, ಕರ್ನಾಟಕ ‌ಸಿಎಂ ಸಿದ್ದರಾಮಯ್ಯ ಅವರು ಪ್ರಧಾನಿಯವರ ಈ ಎಲ್ಲ ಆರೋಪಗಳಿಗೆ ಒಂದೇ ಮಾತಿನಲ್ಲಿ ಪ್ರತಿಕ್ರಿಯಿಸಿದ್ದು, ಕರ್ನಾಟಕದಲ್ಲಿ ಆಡಳಿತ ನಡೆಸುವ ಕನಸು ಕಂಡಿದ್ದ ಬಿಜೆಪಿಯನ್ನು ಜನ ಚುನಾವಣೆಯಲ್ಲಿ ಸೋಲಿಸಿದ್ದರಿಂದ ಅಧಿಕಾರ ವಂಚಿತವಾದ ಬಿಜೆಪಿಯವರು ಹತಾಶರಾಗಿದ್ದಾರೆ.‌ ಅದಕ್ಕೇ ಪ್ರಧಾನಿಯೂ ಸೇರಿದಂತೆ ಬಿಜೆಪಿಯವರು ಬಾಯಿಗೆ ಬಂದಂತೆ ಆರೋಪ ಮಾಡುವುದರಲ್ಲಿ ನಿರತರಾಗಿದ್ದಾರೆ ಎಂದಿದ್ದಾರೆ.