Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಆರು ವರ್ಷದ ಬಾಲಕಿ ಕಿಡ್ನಾಪ್, ತಪ್ಪಿಸಿಕೊಂಡ ಸಹೋದರ: ಹತ್ತು ಲಕ್ಷಕ್ಕೆ ಬೇಡಿಕೆ

ಕೊಲ್ಲಂ: ತನ್ನ ಸಹೋದರನೊಂದಿಗೆ ಟ್ಯೂಷನ್ ತರಗತಿಗೆ ಹೋಗುತ್ತಿದ್ದ ಆರು ವರ್ಷದ ಬಾಲಕಿಯನ್ನು ಕಾರಿನಲ್ಲಿ ಬಂದ ಮಹಿಳೆ ಸಮೇತವಿದ್ದ ತಂಡವೊಂದು ಅಪಹರಣಗೈದ ಘಟನೆ ಸೋಮವಾರ ಕೊಲ್ಲಂ ಓಯೂರಿನಲ್ಲಿ ನಡೆದಿದೆ. ಮಗು ಕಿಡ್ನಾಪ್ ಗೊಂಡ ಸುಮಾರು ಐದು ಗಂಟೆಗಳ ನಂತರ,ಮಗುವಿನ ತಾಯಿಗೆ ಕರೆ ಮಾಡಿ 10 ಲಕ್ಷ ರೂ. ನೀಡುವಂತೆ ಡಿಮ್ಯಾಂಡ್ ಮಾಡಿದ್ದಾರೆ.

ಕಿಡ್ನಾಪ್ ಗೊಂಡ ಬಾಲಕಿಯನ್ನು ಓಯೂರು ಮೂಲದ ಅಬಿಗೈಲ್ ಸಾರಾ ರೆಜಿ ಎಂದು ಗುರುತಿಸಲಾಗಿದೆ. ಬಾಲಕಿಯ ಎಂಟು ವರ್ಷದ ಸಹೋದರ ಜೊನಾಥನ್ ಪ್ರಕಾರ, ಮಾಸ್ಕ್ ಧರಿಸಿದ್ದ ಮೂವರು ಪುರುಷರು ಮತ್ತು ಮಹಿಳೆಯಿದ್ದ ಗುಂಪು ಸಹೋದರಿಯನ್ನು ಬಿಳಿ ಬಣ್ಣದ ಕಾರಿನಲ್ಲಿ ಅಪಹರಿಸಿದ್ದಾರೆ. ಕಿಡ್ನಾಪ್ ವೇಳೆ ಬಾಲಕ ಜೊನಾಥನ್ ಪ್ರತಿರೋಧ ತೋರಿದ್ದರಿಂದ ಆತನಿಗೂ ಸಣ್ಣಪುಟ್ಟ ಗಾಯಗಳಾಗಿದ್ದು,ಆತ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾನೆ ಎನ್ನಲಾಗಿದೆ.

ಬಿಳಿಯ ಸೆಡಾನ್ ಹೋಂಡಾ ಕಾರಿನಲ್ಲಿ ಅಪಹರಣಕಾರರಿದ್ದು ಘಟನೆ ಕುರಿತು ಕೊಲ್ಲಂ ಪೂಯಪ್ಪಲ್ಲಿ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಮಗು ನಾಪತ್ತೆಯಾದ ಮೂರು ಗಂಟೆಗಳ ನಂತರ, ಮಗುವಿನ ತಾಯಿಗೆ ಅಪರಿಚಿತ ಸಂಖ್ಯೆಯಿಂದ ಕರೆ ಬಂದಿದ್ದು, 5 ಲಕ್ಷ ರೂ. ಹಾಗೂ ಐದು ಗಂಟೆಗಳ ನಂತರ, ಅಪಹರಣಕಾರರು 10 ಲಕ್ಷ ರೂ. ಬೇಡಿಕೆ ಇರಿಸಿ ಮಹಿಳೆಯೊಬ್ಬರು
ಫೋನ್ ಕರೆ ಮಾಡಿದ್ದಾರೆ.

” ಮಗು ಸುರಕ್ಷಿತವಾಗಿದೆ. ನಾವು ನಾಳೆ 10 ಗಂಟೆಗೆ ಮತ್ತೆ ಕರೆ ಮಾಡುತ್ತೇವೆ. “ನೀವು 10 ಲಕ್ಷ ರೂ. ವ್ಯವಸ್ಥೆ ಮಾಡಬೇಕು. ಪೊಲೀಸರಿಗೆ ವಿಚಾರ ತಿಳಿಸಬೇಡಿ ಮಗು ಸುರಕ್ಷಿತವಾಗಿ ನಿಮ್ಮ ಮನೆಗೆ ಕರೆತರುತ್ತೇವೆ. ಈ ನಂಬರ್ ಗೆ ಕರೆ ಮಾಡಬೇಡಿ : ಎಂದು ಅಪಹರಣಕಾರರು ಕರೆ ಕಡಿತ ಮಾಡಿದ್ದಾರೆ.

ಪೊಲೀಸರು ಮೊದಲ ಫೋನ್ ಕರೆ ಟ್ರ್ಯಾಕ್ ಮಾಡಲಾಗಿದ್ದು, ಕೊಲ್ಲಂನ ಪಾರಿಪ್ಪಲ್ಲಿ ಅಂಗಡಿಯೊಂದರ ಬಳಿಯಿಂದ ಬಂದಿದ್ದು, ಅಪಹರಣಕಾರರು ಕಾರಿಗೆ ನಕಲಿ ನೋಂದಣಿ ಸಂಖ್ಯೆಯನ್ನು ಬಳಸಿರುವುದು ಕಂಡುಬಂದಿದೆ.