Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಯೆಮನ್ ನಲ್ಲಿ ಕೇರಳದ ನರ್ಸ್ ಗೆ ಮರಣದಂಡನೆ – ತಾಯಿಗೆ ಯೆಮನ್ ಹೋಗಲು ದಿಲ್ಲಿ ಹೈಕೋರ್ಟ್ ಸಮ್ಮತಿ

ನವದೆಹಲಿ: ಯೆಮನ್ ಪ್ರಜೆಯೊಬ್ಬರನ್ನು ಕೊಂದಿದ್ದಾರೆ ಎನ್ನಲಾದ ಪ್ರಕರಣದಲ್ಲಿ ಆ ದೇಶದಲ್ಲಿ ಮರಣ ದಂಡನೆಗೊಳಗಾಗಿರುವ ಕೇರಳದ ನರ್ಸ್ ಒಬ್ಬರ ತಾಯಿಗೆ, ಆ ದೇಶಕ್ಕೆ ಹೋಗಲು ದಿಲ್ಲಿ ಹೈಕೋರ್ಟ್ ಮಂಗಳವಾರ ಅನುಮತಿ ನೀಡಿದೆ.

ಯೆಮನ್ ಪ್ರಜೆಯನ್ನು ಕೊಂದ ಆರೋಪದಲ್ಲಿ 2017ರಿಂದ ಜೈಲು ವಾಸ ಅನುಭವಿಸುತ್ತಿರುವ ಕೇರಳದ ನರ್ಸ್ ನಿಮಿಷಾ ಪ್ರಿಯಾ ಅವರ ಮರಣದಂಡನೆ ವಿರುದ್ಧ ಸಲ್ಲಿಸಿರುವ ಮೇಲ್ಮನವಿ ಅರ್ಜಿಯನ್ನು ಯೆಮನ್‌ ಸುಪ್ರೀಂಕೋರ್ಟ್ ವಜಾಗೊಳಿಸಿದೆ.

ತಲಾಲ್ ಅಬ್ದೊ ಮಹ್ದಿಯ ಸ್ವಾಧೀನದಲ್ಲಿದ್ದ ತನ್ನ ಪಾಸ್‌ಪೋರ್ಟ್ ಅನ್ನು ಮರಳಿ ಪಡೆಯುವ ಪ್ರಯತ್ನದಲ್ಲಿ ಆತನಿಗೆ ನಿದ್ರಾಜನಕ ಚುಚ್ಚುಮದ್ದು ನೀಡಿ ಸಾಯಿಸಿದ ಪ್ರಕರಣದಲ್ಲಿ ಪ್ರಿಯಾಳಿಗೆ ಶಿಕ್ಷೆ ವಿಧಿಸಲಾಗಿತ್ತು.

ನನ್ನ ಮಗಳ ಬಿಡುಗಡೆ ಬಗ್ಗೆ ಮಾತುಕತೆ ನಡೆಸಲು ನನ್ನ ವೈಯಕ್ತಿಕ ಜವಾಬ್ದಾರಿಯಿಂದ ಯಾವುದೇ ಅಪಾಯವನ್ನು ಎದುರಿಸಲು ಸಿದ್ಧವಾಗಿ ಇನ್ನೊಬ್ಬ ವ್ಯಕ್ತಿಯೊಂದಿಗೆ ಯೆಮನ್ ಗೆ ಹೋಗುತ್ತೇನೆ ಹಾಗೂ ಇದರ ಯಾವುದೇ ಹೊಣೆಯು ಭಾರತ ಸರಕಾರ ಅಥವಾ ಸಂಬಂಧಿತ ರಾಜ್ಯ ಸರಕಾರಕ್ಕೆ ಇರುವುದಿಲ್ಲ ಎಂಬ ಅಫಿದಾವಿತನ್ನು ಸಲ್ಲಿಸುವಂತೆ ನ್ಯಾಯಾಲಯವು ಅರ್ಜಿದಾರರಿಗೆ ಸೂಚಿಸಿತು.

ಮೃತ ವ್ಯಕ್ತಿಯ ಕುಟುಂಬ ಸದಸ್ಯರಿಗೆ ಪರಿಹಾರ ನೀಡುವ ಬಗ್ಗೆ ಅವರೊಂದಿಗೆ ಮಾತುಕತೆ ನಡೆಸಲು ನನಗೆ ಮತ್ತು ಇತರ ಮೂವರಿಗೆ ಯೆಮನ್ಗೆ ಪ್ರಯಾಣಿಸಲು ಅನುಮತಿ ನೀಡಬೇಕು ಎಂದು ಪ್ರೇಮಾಕುಮಾರಿ ತನ್ನ ಅರ್ಜಿಯಲ್ಲಿ ಕೋರಿದ್ದರು.