Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

‘ಚುನಾವಣಾ ರಣತಂತ್ರದ ಮಾರ್ಗಸೂಚಿ ಚರ್ಚೆ ಅಗಿದೆ’- ಸಿ.ಟಿ.ರವಿ

ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಎಲ್ಲ ಸ್ಥಾನ ಗೆಲ್ಲಲು ನಮ್ಮ ರಣತಂತ್ರ ಏನಿರಬೇಕು ಎಂಬುದರ ಬಗ್ಗೆ ಸಮಾಲೋಚನೆ ನಡೆಸಿದ್ದೇವೆ. ರಾಜ್ಯ ಮತ್ತು ದೇಶದ ಜನರು ನರೇಂದ್ರ ಮೋದಿಯವರು ಮತ್ತೆ ಪ್ರಧಾನಮಂತ್ರಿ ಆಗಬೇಕೆಂದು ಬಯಸುತ್ತಿದ್ದಾರೆ ಎಂದು ಬಿಜೆಪಿ ನಿಕಟಪೂರ್ವ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ಮಾಜಿ ಸಚಿವ ಸಿ.ಟಿ.ರವಿ ಅವರು ತಿಳಿಸಿದರು.

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಜನರು ನಮ್ಮನ್ನು ಬಯಸುತ್ತಿದ್ದಾರೆ. ನಾವು ವಿಶೇಷ ಪ್ರಯತ್ನ ಮಾಡಿದರೆ, ಒಂದಾಗಿ ಹೋದರೆ 28ಕ್ಕೆ 28 ಲೋಕಸಭಾ ಕ್ಷೇತ್ರ ಗೆಲ್ಲುವ ವಿಶ್ವಾಸ ನಮಗಿದೆ ಎಂದರು.

ರಾಜ್ಯಾಧ್ಯಕ್ಷ ವಿಜಯೇಂದ್ರರವರ ನೇತೃತ್ವದಲ್ಲಿ ಪ್ರಮುಖರ ವಿಶೇಷ ಸಮಾಲೋಚನಾ ಸಭೆ ನಡೆಸಲಾಗಿದೆ. ಲೋಕಸಭಾ ಚುನಾವಣೆಯಲ್ಲಿ 28ರಲ್ಲಿ 28 ಸ್ಥಾನಗಳನ್ನೂ ಗೆಲ್ಲುವ ಕುರಿತು ಯಾವ ರೀತಿ ಕಾರ್ಯಯೋಜನೆ ರೂಪಿಸಬೇಕು. ಜೆಡಿಎಸ್ ಜೊತೆ ಸಮನ್ವಯ ಸಾಧಿಸಿ ಹೇಗೆ ಒಟ್ಟಾಗಿ ಕೆಲಸ ಮಾಡಬೇಕು ಎಂಬ ವಿಷಯ ಚರ್ಚಿಸಲಾಗಿದೆ.

ರಣತಂತ್ರದ ಮಾರ್ಗಸೂಚಿಯ ಚರ್ಚೆ ನಡೆದಿದೆ ಎಂದು ವಿವರಿಸಿದರು.2 ಪದವೀಧರ, 4 ಶಿಕ್ಷಕರ ಕ್ಷೇತ್ರ ಸೇರಿ ವಿಧಾನಪರಿಷತ್ತಿನ 6 ಕ್ಷೇತ್ರಗಳ ಚುನಾವಣೆಯೂ ಬರುತ್ತಿದೆ. ಈ ಚುನಾವಣಾ ದೃಷ್ಟಿಯಿಂದಲೂ ಚರ್ಚೆ ನಡೆದಿದೆ. ಬಿಜೆಪಿಯನ್ನು ಮತ್ತೆ ಸಂಘಟಿಸುವುದೇ ನಮ್ಮ ಗುರಿ ಎಂದು ವಿವರಿಸಿದರು.
ವಿಧಾನಸಭಾ ಚುನಾವಣೆಯ ಸೋಲಿನ ಸೇಡನ್ನು ತೀರಿಸಿಕೊಳ್ಳಲು ಎಲ್ಲ 28 ಲೋಕಸಭಾ ಕ್ಷೇತ್ರಗಳಲ್ಲಿ ಗೆಲ್ಲುವ ಗುರಿ ನಮ್ಮದು. ಅದಕ್ಕಾಗಿ ಎಲ್ಲ ಪ್ರಯತ್ನ ಮಾಡುತ್ತೇವೆ ಎಂದು ತಿಳಿಸಿದರು.