Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ರಾಮ ಜನ್ಮಭೂಮಿ ಹೋರಾಟಗಾರನ ಬಂಧನವನ್ನ ಸಮರ್ಥಿಸಿಕೊಂಡ ಸಿಎಂ ಸಿದ್ಧರಾಮಯ್ಯ

ವಿಜಯಪುರ: ಯಾವತ್ತಿದ್ದರೂ ಅಪರಾಧಿ ಅಪರಾಧಿಯೇ. ಪ್ರಕರಣ ಹಳೆಯದಾಯಿತು ಅಂದರೆ ಮಾಡಿದ ಅಪರಾಧವೂ ಹೋಗುತ್ತದೆಯೇ? ಎಂದು ಸಿಎಂ ಸಿದ್ಧರಾಮಯ್ಯ ಹೇಳಿದ್ದಾರೆ.

ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ, ಹುಬ್ಬಳ್ಳಿಯ ಶಹರ ಠಾಣಾ ಪೊಲೀಸರು ರಾಮ ಜನ್ಮಭೂಮಿ ಹೋರಾಟದಲ್ಲಿ ಭಾಗಿಯಾಗಿದ್ದ ಕಾರ್ಯಕರ್ತ ಶ್ರೀಕಾಂತ್ ಪೂಜಾರಿಯನ್ನು ಬಂಧಿಸಿರುವುದನ್ನು ಸಮರ್ಥನೆ ಮಾಡಿ ಮಾತನಾಡಿದ ಅವರು, ಹಳೆಯ ಪ್ರಕರಣಗಳನ್ನು ಮುಗಿಸುವಂತೆ ಗೃಹ ಸಚಿವ ಡಾ.ಜಿ ಪರಮೇಶ್ವರ್ ಅವರು ತಿಳಿಸಿದ್ದಾರೆ. ಅವರ ಸೂಚನೆಯಂತೆ ಪ್ರಕರಣವನ್ನು ರೀಓಪನ್ ಮಾಡಲಾಗಿದೆ ಎಂದು ಹೇಳಿದರು.

ಇನ್ನು ಕಾಂಗ್ರೆಸ್ ಸರ್ಕಾರದ ಬಗ್ಗೆ ಪ್ರಲ್ಹಾದ್ ಜೋಶಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಅಪರಾಧಿಗಳಿಗೆ ಬೆಂಬಲ ನೀಡುವ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರದ್ದು ನೀಚತನ. ಈಗ ಬಂಧಿಸಿದರೆ ಏನು ತಪ್ಪು? ಬಂಧಿಸಬಾರದು ಎಂದು ಇದೆಯಾ? ಜೋಶಿ ಅವರೇನು ನ್ಯಾಯಾಲಯನಾ? ಅವರು ಹೇಳಿದ್ದೇ ಅಂತಿಮವೇ ಎಂದು ತಿರುಗೇಟು ನೀಡಿದ್ದಾರೆ.

ಸಚಿವ ಜೋಶಿ ಅವರು ರಾಜಕೀಯವಾಗಿ ಮಾತನಾಡುತ್ತಿದ್ದು, ಅವರು ಕಾನೂನಾತ್ಮಕವಾಗಿ ಮಾತನಾಡಲಿ. ಕಾನೂನು ಹೇಳುವುದನ್ನು ಸರ್ಕಾರ ಮಾಡುತ್ತದೆ ಎಂದು ಕಾರ್ಯಕರ್ತ ಶ್ರೀಕಾಂತ್ ಪೂಜಾರಿ ಬಂಧನವನ್ನು ಸಮರ್ಥನಿಕೊಂಡಿದ್ದಾರೆ.