Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಕಂಪನಿಯ ಬೆಳ್ಳಿ ಹಬ್ಬ ವೇಳೆ ವೇದಿಕೆಯಲ್ಲಿಅವಘಡ: ಸಂಸ್ಥೆಯ ‘ಸಿಇಒ’ ಮೃತ್ಯು

ಹೈದರಬಾದ್: ಅಮೆರಿಕದಲ್ಲಿ ನೆಲೆಸಿರುವ ಭಾರತೀಯ ಮೂಲದ ಸಿಇಓ ಹಾಗೂ ಬಹುರಾಷ್ಟ್ರೀಯ ಸಾಫ್ಟ್ ವೇರ್ ಕಂಪನಿಯ ಸಂಸ್ಥಾಪಕ ಕಂಪನಿಯ ರಜತ ಮಹೋತ್ಸವದ ಸಂದರ್ಭದಲ್ಲಿ ಸಮಾರಂಭದ ವೇಳೆ ವೇದಿಕೆಯಲ್ಲಿ ನಡೆದ ದುರಂತದಲ್ಲಿ ಮೃತಪಟ್ಟಿದ್ದಾರೆ.

ಮೃತ ವ್ಯಕ್ತಿಯನ್ನು ಇಲಿನೊಯಿಸ್ ಮೂಲದ ಸಿಇಓ ಸಂಜಯ್ ಶಾ (56) ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಇವರು ಆಸ್ಪತ್ರೆಯಲ್ಲಿ ಮೃತಪಟ್ಟರೆ, ಕಂಪನಿಯ ಅಧ್ಯಕ್ಷ ವಿಶ್ವನಾಥ್ ರಾಜು ಡಾಟ್ತಾ ಜೀವನ್ಮರಣ ಸ್ಥಿತಿಯಲ್ಲಿದ್ದಾರೆ.

ವಿಸ್ಟೆಕ್ ಏಷ್ಯಾ-ಫೆಸಿಫಿಕ್ ಪ್ರೈವೇಟ್ ಲಿಮಿಟೆಡ್ ನ ರಜತ ಮಹೋತ್ಸವವ ಸಮಾರಂಭವನ್ನು ರಾಮೋಜಿ ಫಿಲ್ಮ್ ಸಿಟಿಯಲ್ಲಿ ಆಯೋಜಿಸಲಾಗಿತ್ತು. ಗುರುವಾರ ಸಂಜೆ ನಡೆದ ಆಚರಣೆಯ ಸಂದರ್ಭದಲ್ಲಿ ಈ ದುರಂತ ಸಂಭವಿಸಿದೆ. ಸಮಾರಂಭಕ್ಕೆ ಚಾಲನೆ ನೀಡಲು ಶಾ ಹಾಗೂ ರಾಜು ಕಬ್ಬಿಣದ ಗೂಡಿನಿಂದ ಕೆಳಗಿಳಿದು ವೇದಿಕೆಗೆ ಬರಬೇಕಿತ್ತು. ಅವರನ್ನು ರೋಪ್ ಬಳಸಿ ಕಬ್ಬಿಣದ ಗೂಡಿನ ಮೂಲಕ ಕೆಳಗಿದ್ದ ವೇದಿಕೆಗೆ ಕರೆತರಲು ಉದ್ದೇಶಿಸಲಾಗಿತ್ತು. ಸಂಗೀತದ ಹಿಮ್ಮೇಳದಲ್ಲಿ ಶಾ ಹಾಗೂ ರಾಜು ಸಿಬ್ಬಂದಿಗೆ ಕೈಬೀಸುತ್ತಾ ಇಳಿಯುತ್ತಿದ್ದರು. ಆದರೆ ದಿಢೀರನೇ ಈ ಕಬ್ಬಿಣದ ಗೂಡಿಗೆ ಜೋಡಿಸಿದ್ದ ಎರಡು ವೈರ್ ಗಳ ಪೈಕಿ ಒಂದು ತುಂಡಾಯಿತು. ಇಬ್ಬರೂ 15 ಅಡಿ ಕೆಳಕ್ಕೆ ಬಿದ್ದು, ಕಾಂಕ್ರಿಟ್ ವೇದಿಕೆಗೆ ಅಪ್ಪಳಿಸಿದರು. ಗಂಭೀರ ಗಾಯಗೊಂಡ ಇವರನ್ನು ತಕ್ಷಣ ಆಸ್ಪತ್ರೆಗೆ ಆಸ್ಪತ್ರೆಗೆ ಸೇರಿಸಲಾಯಿತಾದರೂ ಶಾ ಮೃತಪಟ್ಟಿದ್ದಾರೆ.

ಕಂಪನಿಯ ಇನ್ನೊಬ್ಬ ಅಧಿಕಾರಿ ನೀಡಿದ ದೂರಿನ ಆಧಾರದ ಮೇಲೆ ಫಿಲ್ಮ್ ಸಿಟಿ ಈವೆಂಟ್ ಮ್ಯಾನೇಜ್‌ಮೆಂಟ್ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.