Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಭೀಕರ ರಸ್ತೆ ಅಪಘಾತದಲ್ಲಿ ಶ್ರೀಲಂಕಾ ಸಚಿವ ಹಾಗೂ ಪೊಲೀಸ್ ಅಧಿಕಾರಿ ಸಾವು

ಕೊಲಂಬೋ: ಕೊಲಂಬೊ-ಕಟುನಾಯಕೆ ಎಕ್ಸ್‌ಪ್ರೆಸ್‌ವೇಯಲ್ಲಿ ಗುರುವಾರ ಸಂಭವಿಸಿದ ರಸ್ತೆ ಅಪಘಾತದಲ್ಲಿ ಶ್ರೀಲಂಕಾದ ಜಲ ಸಂಪನ್ಮೂಲ ರಾಜ್ಯ ಸಚಿವ ಸನತ್ ನಿಶಾಂತ (48) ಮತ್ತು ಪೊಲೀಸ್ ಅಧಿಕಾರಿಯೊಬ್ಬರು ಸಾವನ್ನಪ್ಪಿದ ಘಟನೆ ನಡೆದಿದೆ.

ಗುರುವಾರ ಮುಂಜಾನೆ ಸಚಿವರು ಸಂಚರಿಸುತ್ತಿದ್ದ ವಾಹನವು, ಕಂಟೈನರ್ ಟ್ರಕ್‌ಗೆ ಡಿಕ್ಕಿ ಹೊಡೆದಿದ್ದು, ನಂತರ ರಸ್ತೆಯ ತಡೆಗೋಡೆಗೆ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ವಾಹನ ಸಂಪೂರ್ಣ ಜಖಂಗೊಂಡಿದೆ.

ಪರಿಣಾಮ ಸಚಿವರು, ಸಚಿವರ ಪೊಲೀಸ್ ಅಧಿಕಾರಿ , ಹಾಗೂ ವಾಹನ ಚಾಲಕ ಗಂಭೀರವಾಗಿ ಗಾಯಗೊಂಡಿದ್ದು, ರಾಗಮಾ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಅಲ್ಲಿ ಸಚಿವರು, ಪೊಲೀಸ್ ಅಧಿಕಾರಿ ಸಾವನ್ನಪ್ಪಿದ್ದು, ವಾಹನದ ಚಾಲಕ ಪ್ರಸ್ತುತ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ವಾಹನ ಕಟುನಾಯಕೆಯಿಂದ ಕೊಲಂಬೊಗೆ ತೆರಳುತ್ತಿತ್ತು. ನಿಶಾಂತ ಅವರು ಶ್ರೀಲಂಕಾದ ಪ್ರಮುಖ ರಾಜಕಾರಣಿಯಾಗಿದ್ದು, ಅವರು 2015 ಮತ್ತು 2020 ರಲ್ಲಿ ಪುತ್ತಲಂ ಜಿಲ್ಲೆಯಿಂದ ಸಂಸತ್ತಿಗೆ ಚುನಾಯಿತರಾಗಿದ್ದರು.