Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಅಕ್ರಮ ಹಣ ವರ್ಗಾವಣೆ ಆರೋಪ ಎದುರಿಸುತ್ತಿರುವ ಜಾರ್ಖಂಡ್ ಸಿಎಂ,ಪತ್ನಿ ಸಿಎಂ ಆಗುವ ಸಾಧ್ಯತೆ

ಜಾರ್ಖಂಡ್:ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರನ್ನು ಬಂಧಿಸಿದರೆ ಅವರ ಪತ್ನಿ ಕಲ್ಪನಾ ಸೊರೆನ್ ವಹಿಸಿಕೊಳ್ಳಲಿದ್ದಾರೆ ಅನ್ನುವ ಮಾಹಿತಿಗಳು ಲಭ್ಯವಾಗಿದೆ.

ಈ ತಿಂಗಳ ಆರಂಭದಲ್ಲಿ ಬಿಜೆಪಿ ಸಂಸದ ನಿಶಿಕಾಂತ್ ದುಬೆ ಕೂಡ ಇದೇ ರೀತಿಯ ಹೇಳಿಕೆ ನೀಡಿದ್ದರು, ಆದರೆ ಸ್ವತಃ ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರು ತಮ್ಮ ಪತ್ನಿ ಚುನಾವಣೆಯಲ್ಲಿ ಸ್ಪರ್ಧಿಸುವ ಸಾಧ್ಯತೆಯನ್ನು ನಿರಾಕರಿಸಿದ್ದರು.

ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯವು ಇಂದು ಹೇಮಂತ್ ಸೊರೆನ್ ವಿಚಾರಣೆ ನಡೆಸಲಿದ್ದು ಬಂಧಿಸುವ ಸಾಧ್ಯತೆಗಳು ಇವೆ. ಇದೇ ವೇಳೆ ಅವರ ಪತ್ನಿ ಕಲ್ಪನಾ ಅವರನ್ನು ಮುಖ್ಯಮಂತ್ರಿ ಮಾಡಬಹುದು ಎಂಬ ಪ್ರಸ್ತಾವನೆ ಶಾಸಕರ ಸಭೆಯಲ್ಲಿ ವ್ಯಕ್ತವಾಗಿದೆ ಎಂದು ಮೂಲಗಳು ತಿಳಿಸಿವೆ.

ಸೊರೆನ್ ಪತ್ನಿ ಶಾಸಕರಲ್ಲ, ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರೆ ಆರು ತಿಂಗಳೊಳಗೆ ಉಪಚುನಾವಣೆಯಲ್ಲಿ ಗೆದ್ದು ವಿಧಾನಸಭೆ ಸದಸ್ಯೆಯಾಗಬೇಕು.
ವಿಧಾನಸಭೆಯ ಅವಧಿ ಒಂದು ವರ್ಷಕ್ಕಿಂತ ಕಡಿಮೆ ಅವಧಿಯಲ್ಲಿ ಕೊನೆಗೊಳ್ಳುವುದರಿಂದ ಉಪಚುನಾವಣೆ ಸಾಧ್ಯತೆಯನ್ನು ತಳ್ಳಿಹಾಕಬಹುದು.

ಒಡಿಶಾದ ಮಯೂರ್ಭಂಜ್ ನ ನಿವಾಸಿಯಾಗಿರುವ ಕಲ್ಪನಾ ಅವರು ಹೇಮಂತ್ ಸೊರೆನ್ ಅವರನ್ನು ಫೆಬ್ರವರಿ 7, 2006 ರಂದು ವಿವಾಹವಾಗಿದ್ದರು ಮತ್ತು ದಂಪತಿಗೆ ಇಬ್ಬರು ಮಕ್ಕಳಿದ್ದಾರೆ.

ಇನ್ನು ಹೇಮಂತ್ ಸೊರೆನ್ ಅವರ ಪತ್ನಿ 1976 ರಲ್ಲಿ ರಾಂಚಿಯಲ್ಲಿ ಜನಿಸಿದರು. ಅವರ ತಂದೆ ಉದ್ಯಮಿ ಮತ್ತು ತಾಯಿ ಗೃಹಿಣಿ. ಇಂಜಿನಿಯರಿಂಗ್ ಪದವಿ ಮುಗಿಸಿ, ನಂತರ ಎಂಬಿಎ ಮಾಡಿದರು.

ಕಲ್ಪನಾ ಸೊರೆನ್ ಅವರು ಶಾಲೆಯೊಂದನ್ನು ನಡೆಸುತ್ತಿದ್ದಾರೆ, ಸಾವಯವ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ ಮತ್ತು ಸುಮಾರು 5 ಕೋಟಿ ರೂ. ಮೌಲ್ಯದ ಮೂರು ವಾಣಿಜ್ಯ ಕಟ್ಟಡಗಳನ್ನು ಹೊಂದಿದ್ದಾರೆ ಎಂದು ವರದಿಯಾಗಿದೆ.

ಅವರು ಹೆಚ್ಚಾಗಿ ಮಹಿಳಾ ಮತ್ತು ಮಕ್ಕಳ ಸಬಲೀಕರಣ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾರೆ.

2022 ರಲ್ಲಿ ಮಾಜಿ ಮುಖ್ಯಮಂತ್ರಿ ರಘುಬರ್ ದಾಸ್ ಅವರು ಸೋರೆನ್ ಅವರ ಪತ್ನಿ ಒಡೆತನದ ಕಂಪನಿಗೆ ಕೈಗಾರಿಕಾ ಪ್ರದೇಶದಲ್ಲಿ ಪ್ಲಾಟ್ ಮಾಡಲು ತಮ್ಮ ಸ್ಥಾನವನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಆರೋಪಿಸಿದಾಗ ಸೊರೆನ್ ಅವರ ಪತ್ನಿಯ ವಿಚಾರ ಬೆಳಕಿಗೆ ಬಂದಿದೆ.