Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣ ಭಾವಚಿತ್ರ ಅನಾವರಣ; ಫೆ.17ರಿಂದ ಕಚೇರಿಗಳಲ್ಲಿ ಫೋಟೋ ಅಳವಡಿಕೆ

ಬೆಂಗಳೂರು : ವಿಧಾನಸೌಧದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ನಾಯಕ- ವಿಶ್ವಗುರು ಬಸವಣ್ಣನವರ ಭಾವಚಿತ್ರ ಹಾಗೂ ವಚನ‌ ವಿವೇಕ ಕಿರುಹೊತ್ತಿಗೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಡುಗಡೆಗೊಳಿಸಿದರು.

ಇದೇ ವೇಳೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಫೆ.17 ರಂದು ರಾಜ್ಯದ ಎಲ್ಲಾ ಸರ್ಕಾರಿ ಕಚೇರಿಯಲ್ಲಿ ಬಸವಣ್ಣರ ನೂತನ ಭಾವಚಿತ್ರ ಅನಾವರಣಗೊಳಿಸಲಾಗುತ್ತದೆ.‌ ಪ್ರತಿ ಭಾವಚಿತ್ರದ‌‌ ಕೆಳಗಡೆ ಸಾಂಸ್ಕೃತಿಕ ನಾಯಕ ಬಸವಣ್ಣ ಅಂತ ಬರೆಯುತ್ತೇವೆ. ಬುದ್ಧ, ಬಸವಣ್ಣ, ಗಾಂಧಿ ಹಾಗೂ ಅಂಬೇಡ್ಕರ್ ಬಗ್ಗೆ ಇಡೀ ವಿಶ್ವವೇ ಮಾತನಾಡುತ್ತದೆ. ಇವರು ನಮ್ಮ ಸಮಾಜದಲ್ಲಿ ಇರುವ ಅಂಕುಡೊಂಕು ತಿದ್ದಿ, ಆರೋಗ್ಯಕರ ಸಮಾಜ ನಿರ್ಮಾಣ ಮಾಡಿದ್ದಾರೆ ಎಂದರು.

ಮೌಢ್ಯಗಳನ್ನು ಸಮಾಜದಲ್ಲಿ ನೋಡಿದ್ದೇವೆ. ಸಮಾಜದ ಬದಲಾವಣೆಗಾಗಿ ಅಸಮಾನತೆ ಹೋಗಬೇಕು. ಪ್ರತಿಯೊಬ್ಬರೂ ಸ್ವಾಭಿಮಾನದಿಂದ ಬದುಕುವ ವ್ಯವಸ್ಥೆ ನಿರ್ಮಾಣ ಆಗಬೇಕು ಎಂದು ಬಸವಣ್ಣ ಕನಸು ಕಂಡಿದ್ದರು. ಅದರಂತೆಯೇ ಬಸವಣ್ಣ ನಡೆದುಕೊಂಡಿದ್ದರು. ಇದು ಜನಪರವಾದ ಸಮಾಜ. ಆಡು ಮಾತಿನಲ್ಲೇ ಬಸವಣ್ಣ ವಚನ ರೂಪಿಸಿದ್ದವರು. ಜನರಿಗೆ ಅರ್ಥವಾಗುವ ರೀತಿಯಲ್ಲಿ ವಚನಗಳನ್ನು ರಚನೆ‌ ಮಾಡಿದ್ದಾರೆ.

ನನಗೆ ಸಂಸ್ಕೃತ ಭಾಷೆ ಗೊತ್ತಾಗಲ್ಲ. ಕನ್ನಡ ಬಾಷೆಯಲ್ಲಿ ವಚನಗಳನ್ನು ಜನರಿಗೆ ಅರ್ಥ ಆಗುವ ರೀತಿಯಲ್ಲಿ ಹೇಳುತ್ತಿದ್ದರು. ಕಾಗೆ ಒಂದು ಅಗುಳ ಕಂಡರೆ ಕರೆಯದೆ ತನ್ನ ಬಳಗವ, ಕೋಳಿ ಒಂದು ಕುಟುಕ ಕಂಡೊಡೆ ಕೂಗಿ ಕರೆಯದೆ ತನ್ನ ಕುಲವನೆಲ್ಲವ, ಶಿವಭಕ್ತನಾಗಿ ಭಕ್ತಿಪಕ್ಷವಿಲ್ಲದಿದ್ದಡೆ ಕಾಗೆ ಕೋಳಿಗಳಿಗಿಂತ ಕರಕಷ್ಟ ಕೂಡಲಸಂಗಮದೇವಾ ಎಂದು ಬಸವಣ್ಣರ ವಚನಗಳನ್ನು ಉಲ್ಲೇಖಿಸಿದರು.