Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಕೃಷಿಯಲ್ಲಿ ಉದ್ಯೋಗ ಮಾಡಿಕೊಳ್ಳಲು ಗರಿಷ್ಠ 20 ಲಕ್ಷ ಸಹಾಯಧನ ನೀಡಲು ಅರ್ಜಿ ಆಹ್ವಾನ..!

ಕರ್ನಾಟಕ ಸರ್ಕಾರ ಕೃಷಿ ಕ್ಷೇತ್ರದಲ್ಲಿ ಉದ್ಯಮಶೀಲತೆಯನ್ನು ಹೆಚ್ಚಿಸಲು ಹಾಗೂ ಗ್ರಾಮೀಣ ಭಾಗದ ಯುವಕರಿಗೆ ಉದ್ಯೋಗ ಸೃಜಿಸುವ ನಿಟ್ಟಿನಲ್ಲಿ ‘ ಕೃಷಿ ನವೋದ್ಯಮ ‘ ಎಂಬ ಹೊಸ ಯೋಜನೆ ಜಾರಿಗೊಳಿಸುತ್ತಿದೆ . ಕೃಷಿ ವಲಯಲ್ಲಿನ ನೂತನ ತಾಂತ್ರಿಕತೆಗಳು , ಆವಿಷ್ಕಾರ ಹಾಗೂ ನವೀನ ಪರಿಕಲ್ಪನೆಗಳ ಸೇವೆಗಳನ್ನು ಒಳಗೊಂಡ ವಾಣಿಜೀಕರಣವನ್ನು ಉತ್ತೇಜಿಸುವ ಗುರಿಯೊಂದಿಗೆ ನೂತನ ಯೋಜನೆ ಅನುಷ್ಠಾನಗೊಳ್ಳುತ್ತಿದೆ . ಈ ಯೋಜನೆಯಡಿ ಗರಿಷ್ಠ 20 ಲಕ್ಷ ರೂ . ವರೆಗೆ ಸಹಾಯಧನ ನೀಡಲಾಗುತ್ತದೆ . ಕೃಷಿ ಪದವೀಧರರು , ವಿದ್ಯಾವಂತ ಯುವಕರು , ಆಸಕ್ತ ಪ್ರಗತಿ ಪರ ರೈತರು ಹೊಸದಾಗಿ ಕೃಷಿಯಲ್ಲಿ ನವೋದ್ಯಮ ಸ್ಥಾಪಿಸಲು ಮುಂದೆ ಬರುವವರಿಗೆ ಸ್ಟಾರ್ಟಪ್ ಯೋಜನೆಯ ವರದಿಯ ಶೇ 50 ರಷ್ಟು ಅಂದರೆ 5 ರಿಂದ 20 ಲಕ್ಷ ರೂ . ವರೆಗೆ ಸಬ್ಸಿಡಿ ಸಿಗಲಿದೆ.

ಯೋಜನೆಯ ವಿವರ: ಕೋವಿಡ್ ಪರಿಸ್ಥಿತಿಯ ಬಳಿಕ ನಗರಗಳಿಂದ ಯುವಕರು ಗ್ರಾಮಗಳಿಗೆ ಆಗಮಿಸುವುದು ಕೃಷಿ , ಕೃಷಿಯ ಇತರ ಉದ್ಯಮದಲ್ಲಿ ತೊಡಗುವುದು ಹೆಚ್ಚಾಗಿದೆ . ಆದ್ದರಿಂದ ರಾಜ್ಯ ಸರ್ಕಾರ ಕೃಷಿ ಉತ್ಪನ್ನಗಳ ಮಾರುಕಟ್ಟೆ , ಮೌಲ್ಯ ವರ್ಧನೆ ಪ್ರೋತ್ಸಾಹಿಸಲು ‘ ಕೃಷಿ ನವೋದ್ಯಮ ‘ ಎಂಬ ಯೋಜನೆ ಜಾರಿಗೊಳಿಸುತ್ತಿದೆ . ಈ ಬಾರಿಯ ಬಜೆಟ್ ಮಂಡನೆ ಮಾಡಿದ ಹಣಕಾಸು ಖಾತೆ ಸಚಿವರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ‘ ಕೃಷಿ ನವೋದ್ಯಮ ‘ ಎಂಬ ಯೋಜನೆ ಘೋಷಣೆ ಮಾಡಿದ್ದರು . ಅಲ್ಲದೇ 10 ಕೋಟಿ ರೂ . ಅನುದಾನವನ್ನು ಮೀಸಲಿಟ್ಟರು.

‘ ಕೃಷಿ ನವೋದ್ಯಮ ‘ ಯೋಜನೆಯಡಿ ಹೊಸ ಯೋಜನೆ ಅಲ್ಲದೇ ಈಗಾಗಾಲೇ ಸ್ಥಾಪಿಸಲಾದ ನವೋದ್ಯಮಗಳ ವಿಸ್ತರಣೆ ಅಥವಾ ಮೇಲ್ದರ್ಜೆಗೇರಿಸಲು ( Scale up ) ಗೂ ಶೇ .50 ರಷ್ಟು ಸಹಾಯಧನ ( 20 ರಿಂದ ಗರಿಷ್ಠ 50 ಲಕ್ಷ ರೂ . ) ವರೆಗೆ ಬ್ಯಾಂಕ್‌ನಿಂದ ಸಾಲದ ಮೂಲಕ ( Backended Subsidy ) ನೀಡಲಾಗುತ್ತದೆ .< ಯೋಜನೆಯ ಫಲಾನುಭವಿಗಳನ್ನು ಜಿಲ್ಲಾ ಮಟ್ಟದ ತಾಂತ್ರಿಕ ಸಮಿತಿ , ಅನುಷ್ಠಾನ ಸಮಿತಿ ಒಪ್ಪಿಗೆಯ ನಂತರ ರಾಜ್ಯ ಮಟ್ಟದಲ್ಲಿ ಅನುಮೋದನೆ ಪಡೆದ ಬಳಿಕ ಆಯ್ಕೆ ಮಾಡಿ ಸಹಾಯಧನವನ್ನು ನೀಡಲಾಗುತ್ತದೆ.

ಆಸಕ್ತರು ತಾಲೂಕು ಸಹಾಯಕ ಕೃಷಿ ನಿರ್ದೇಶಕರನ್ನು ಅಥವಾ ಜಂಟಿ ಕೃಷಿ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸಬಹುದು . ರೈತರನ್ನು ಉದ್ಯಮಿಗಳಾಗಿ ಮಾಡಿದರೆ ಕೃಷಿ ಉತ್ಪನ್ನಗಳ ಮೌಲ್ಯ ವರ್ಧನೆ ಆಗುತ್ತದೆ . ಇದರಿಂದಾಗಿ ರೈತರ ಆದಾಯ ದ್ವಿಗುಣವಾಗುತ್ತದೆ . ಈಗಾಗಲೇ ಹಲವು ರೈತರು ಇಂತಹ ಉದ್ಯಮ ಸ್ಥಾಪನೆ ಮಾಡಿ ಮಧ್ಯವರ್ತಿಗಳ ಹಸ್ತಕ್ಷೇಪವಿಲ್ಲದೇ ಉತ್ಪನ್ನಗಳನ್ನು ಮಾರಾಟ ಮಾಡಿ ಲಾಭವನ್ನು ಪಡೆದಿದ್ದಾರೆ . ಕೃಷಿ ವಿವಿಗಳ ಸಂಶೋಧನೆಗಳನ್ನು ಜಮೀನಿಗೆ ತೆಗೆದುಕೊಂಡು ಹೋಗುವುದು , ನವೋದ್ಯಮ ಸ್ಥಾಪನೆಗೆ ಸರ್ಕಾರ ಈ ಯೋಜನೆಯಡಿ ಸಬ್ಸಿಡಿ ನೀಡಲಿದೆ.

ನವೋದ್ಯಮಗಳನ್ನು ಗುರುತಿಸಲು ಜಿಲ್ಲಾ ಮಟ್ಟದಲ್ಲಿ , ರಾಜ್ಯ ಮಟ್ಟದಲ್ಲಿ ಕೃಷಿ ಇಲಾಖೆ ಅಧಿಕಾರಿಗಳ ನೇತೃತ್ವದಲ್ಲಿ ಸಮಿತಿಗಳನ್ನು ರಚನೆ ಮಾಡಲಾಗುತ್ತದೆ.ಸರ್ಕಾರ ಮೊದಲ ಹಂತದಲ್ಲಿ ಮೈಸೂರು , ಹುಬ್ಬಳ್ಳಿ , ಕಲಬುರಗಿ , ಮಂಗಳೂರು , ಬೆಳಗಾವಿ , ವಿಜಯಪುರ , ದಾವಣಗೆರೆ , ಶಿವಮೊಗ್ಗ ಮತ್ತು ಬಳ್ಳಾರಿ ಹೀಗೆ ಎರಡನೇ ದರ್ಜೆಯ ನಗರಗಳಲ್ಲಿ ಇಂತಹ ನವೋದ್ಯಮ ಸ್ಥಾಪನೆ ಮಾಡಲು ಒತ್ತು ನೀಡಲಿದೆ . ಆ ಪ್ರಾದೇಶಿಕ ಭಾಗದ ಕೃಷಿ ಉತ್ಪನ್ನಗಳನ್ನು ಆಧರಿಸಿ ಉದ್ಯಮ ಸ್ಥಾಪನೆ ಮಾಡುವುದು ಸರ್ಕಾರದ ಆಶಯ . ಕೇಂದ್ರ ಸರ್ಕಾರ 2014 ರಿಂದಲೇ ನವೋದ್ಯಮ ಸ್ಥಾಪನೆಗೆ ಒತ್ತನ್ನು ನೀಡುತ್ತಿದೆ.

ದೇಶದಲ್ಲಿ 70 ಸಾವಿರಕ್ಕೂ ಅಧಿಕ ಸ್ಟಾರ್ಟ್ ಅಪ್‌ಗಳಿವೆ . ಆದರೆ ಕೃಷಿಗೆ ಸಂಬಂಧಿಸಿದ ನವೋದ್ಯಮಗಳು ಕಡಿಮೆ . ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೃಷಿ , ಕೃಷಿ ಸಂಬಂಧಿತ ನವೋದ್ಯಮಗಳು ಹೆಚ್ಚಾಗಬೇಕು ಎಂದು ಪ್ರೋತ್ಸಾಹವನ್ನು ನೀಡುತ್ತಿವೆ . ನವೋದ್ಯಮಗಳ ಸ್ಥಾಪನೆಯಿಂದ ರೈತರಿಗೆ ನೆರವಾಗುವುದಲ್ಲದೇ ತಾಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಉದ್ಯೋಗ ಸೃಷ್ಟಿಯಾಗುತ್ತದೆ . ಇದರಿಂದ ಪ್ರಾದೇಶಿಕ ಮಟ್ಟದಲ್ಲಿಯೇ ರೈತರ ಬೆಳೆಗಳಿಗೆ ಬೇಡಿಕೆ ಬರಲಿದೆ.