Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ರಾಜ್ಯ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ: ಮೂಲವೇತನಕ್ಕೆ ಶೇಕಡ ಎಷ್ಟು ಹೆಚ್ಚಳ .?

 

ಬೆಂಗಳೂರು:  ರಾಜ್ಯ ಸರ್ಕಾರಿ ನೌಕರರ ಮೂಲವೇತನ ಶೇಕಡ 58.5 ರಷ್ಟು ಹೆಚ್ಚಳಕ್ಕೆ 7ನೇ ವೇತನ ಆಯೋಗ ಶಿಫಾರಸು ಮಾಡಿದೆ.

ಆಯೋಗದ ಅಧ್ಯಕ್ಷರಾದ ನಿವೃತ್ತ ಮುಖ್ಯ ಕಾರ್ಯದರ್ಶಿ ಕೆ. ಸುಧಾಕರ ರಾವ್ ನೇತೃತ್ವದ ಸಮಿತಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಶನಿವಾರ ಭೇಟಿಯಾಗಿ 244 ಪುಟಗಳ ವರದಿ ಸಲ್ಲಿಸಿದೆ.

ರಾಜ್ಯ ಸರ್ಕಾರಿ ನೌಕರರ ವೇತನ ಪರಿಷ್ಕರಣೆಗಾಗಿ ರಚಿಸಲಾಗಿದ್ದ 7ನೇ ವೇತನ ಆಯೋಗ ಶೇಕಡ 31 ರಷ್ಟು ಡಿಎ ಯನ್ನು ಮೂಲವೇತನದಲ್ಲಿ ವಿಲೀನಗೊಳಿಸುವ ಜೊತೆಗೆ ಶೇಕಡ 27.50ರಷ್ಟು ಫಿಟ್ ಮೆಂಟ್ ನೀಡುವಂತೆ ಸರ್ಕಾರಕ್ಕೆ ಶಿಫಾರಸು ಮಾಡಿದೆ.

ವಾರ್ಷಿಕ ವೇತನ ಬಡ್ತಿ ದರ ಕನಿಷ್ಠ 400 ರೂ.ನಿಂದ ಗರಿಷ್ಠ 650ರೂ., ಕನಿಷ್ಠ 3100ರೂ. ನಿಂದ 5000 ರೂ. ಹೆಚ್ಚಳ ಮಾಡಲು ಶಿಫಾರಸು ಮಾಡಲಾಗಿದೆ. ಸಮವಸ್ತ್ರ, ಪ್ರಯಾಣ ಭತ್ಯೆ, ದಿನ ಭತ್ಯೆಗಳನ್ನು ಶೇ. 25 ರಷ್ಟು ಹೆಚ್ಚಳ ಮಾಡಲು ವರದಿಯಲ್ಲಿ ಸಲಹೆ ನೀಡಲಾಗಿದೆ. ಅಂಗವಿಕಲ ಮಕ್ಕಳ ಶೈಕ್ಷಣಿಕ ಭತ್ಯೆ ಒಂದು ಸಾವಿರದಿಂದ ಎರಡು ಸಾವಿರಕ್ಕೆ ಹೆಚ್ಚಳ, ಗೃಹ ನಿರ್ಮಾಣ ಮುಂಗಡ 40ಲಕ್ಷ ರೂ.ನಿಂದ 65 ಲಕ್ಷ ರೂ.ವರೆಗೆ ಹೆಚ್ಚಳ, ಗ್ರೂಪ್ ಸಿ, ಡಿ ವೃಂದದ ವೈದ್ಯಕೀಯ ಭತ್ಯೆ 200 ರಿಂದ 500 ರೂಪಾಯಿ ಹೆಚ್ಚಳಕ್ಕೆ ಶಿಫಾರಸು ಮಾಡಲಾಗಿದೆ.

ತಿಂಗಳ ಪಿಂಚಣಿಯನ್ನು ಮೂಲವೇತನದ ಶೇಕಡ 50ರಷ್ಟು, ಕುಟುಂಬ ಪಿಂಚಣಿಯನ್ನು ಶೇಕಡ 30ರಷ್ಟು ಮುಂದುವರೆಸಿದ್ದು, ಪಿಂಚಣಿಯು ಕನಿಷ್ಠ 13500 ರೂ.ನಿಂದ 1.20 ಲಕ್ಷ ರೂ. ವರೆಗೆ ನಿಗದಿ ಮಾಡಲಾಗಿದೆ. 70 ರಿಂದ 80 ವರ್ಷ ವಯಸ್ಸಿನ ಪಿಂಚಣಿದಾರರಿಗೆ ಮೂಲ ಪಿಂಚಣಿ ಶೇಕಡ 10 ರಷ್ಟು ಹೆಚ್ಚಳ ಮಾಡಬೇಕೆಂದು ಹೇಳಲಾಗಿದೆ.