ಕೆಟ್ಟು ನಿಂತ ಕೇಬಲ್ ಕಾರ್: 15 ಗಂಟೆಗಳ ಕಾರ್ಯಾಚರಣೆ ಬಳಿಕ 8 ಮಂದಿಯ ರಕ್ಷಣೆ

ಇಸ್ಲಾಮಾಬಾದ್: ಪಾಕಿಸ್ತಾನದ ಖೈಬರ್-ಪಖ್ತುಂಖ್ವಾ ಪ್ರಾಂತ್ಯದಲ್ಲಿ ಕೇಬಲ್ ತುಂಡಾಗಿ ಕೇಬಲ್ ಕಾರ್ ನಲ್ಲಿ ಸಿಲುಕಿದ್ದ ಎಂಟು ಮಂದಿಯನ್ನು ಸುಮಾರು ಹದಿನೈದು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ರಕ್ಷಣೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಅಲ್ಲೈ ಜಿಲ್ಲೆಯ ಅಲ್ಲೈ ತೆಹಸಿಲ್‌ನಲ್ಲಿ ಮಂಗಳವಾರ ಬೆಳಿಗ್ಗೆ ಆರು ಮಕ್ಕಳು ಸೇರಿದಂತೆ ಒಟ್ಟು ಎಂಟು ಮಂದಿ ಸುಮಾರು 900 ಅಡಿ ಎತ್ತರದಲ್ಲಿ ಹೋಗುತ್ತಿದ್ದಾಗ ಕೇಬಲ್ ಕಾರ್ ನ ತಂತಿ ತುಂಡಾಗಿ ಅಪಾಯದಲ್ಲಿ ಸಿಲುಕಿದ್ದರು ಎನ್ನಲಾಗಿದೆ.

ಕಣಿವೆ ಪ್ರದೇಶವಾಗಿದ್ದರಿಂದ ಇಲ್ಲಿನ ಜನ ಸಂಚಾರಕ್ಕೆ ಕೇಬಲ್ ಕಾರನ್ನೇ ಉಪಯೋಗಿಸುತ್ತಾರೆ. ಹಾಗೇ ಶಾಲೆಗೆ ಹೊರಟಿದ್ದ ಆರು ಮಕ್ಕಳನ್ನು ಕರೆದುಕೊಂಡು ಕೇಬಲ್ ಕಾರ್ ನಲ್ಲಿ ಹೋಗುತ್ತಿದ್ದ ವೇಳೆ ಕಣಿವೆ ಮಧ್ಯದಲ್ಲಿ ಸುಮಾರು 900 ಅಡಿ ಎತ್ತರದಲ್ಲಿ ಹೋಗುತ್ತಿರುವಾಗ ತಂತಿ ತುಂಡಾಗಿ ಕೇಬಲ್ ಕಾರ್‌ನಲ್ಲಿ ಸಿಲುಕಿಕೊಂಡಿದ್ದಾರೆ. ತಕ್ಷಣ ಇತರರು ಕೇಬಲ್ ಕಾರ್ ನಲ್ಲಿ ಚಲಿಸುತ್ತಿದ್ದ ಮಂದಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

ಕೂಡಲೇ ಕೇಬಲ್ ಕಾರಿನಲ್ಲಿ ಸಿಲುಕಿರುವ ಜನರನ್ನು ರಕ್ಷಿಸಲು ಖೈಬರ್ ಪಖ್ತುಂಖ್ವಾ  ಸಿಎಂ ಅಜಂ ಖಾನ್‌ ಹೆಲಿಕಾಪ್ಟರ್ ಅನ್ನು ಬಳಸುವಂತೆ ಆದೇಶ ನೀಡಿದ ಹಿನ್ನಲೆ  ಸತತ ಹದಿನೈದು ಗಂಟೆಗಳ ಕಾರ್ಯಾಚರಣೆ ನಡೆಸಿ ಕೇಬಲ್ ಕಾರ್ ನಲ್ಲಿ ಸಿಲುಕಿದ್ದ ಎಂಟು ಮಂದಿಯನ್ನು ಪಾಕಿಸ್ತಾನದ ಸೇನಾ ಪಡೆ ರಕ್ಷಣೆ ಮಾಡಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Comments (0)
Add Comment