ದೆಹಲಿ: ಪ್ರಾರ್ಥನೆ ವೇಳೆ ಚರ್ಚ್ ಮೇಲೆ ಹಿಂದೂ ಸಂಘಟನೆ ದಾಳಿ – ಓರ್ವನ ಬಂಧನ

ನವದೆಹಲಿ: ದೆಹಲಿಯ ಚರ್ಚ್ ನಲ್ಲಿ ಪ್ರಾರ್ಥನೆ ನಡೆಸುತ್ತಿದ್ದ ವೇಳೆ ಹಿಂದೂ ಸಂಘಟನೆಯ ಸದಸ್ಯರು ಚರ್ಚ್ ಗೆ ನುಗ್ಗಿ ದಾಂಧಲೆ ನಡೆಸಿ ಘೋಷಣೆಗಳನ್ನು ಕೂಗಿದ ಘಟನೆಗೆ ಸಂಬಂಧಿಸಿದಂತೆ ಆರೋಪಿ ಹಿಂದೂ ಸಂಘಟನೆಯ ಮುಖಂಡರೊಬ್ಬರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.

ದೆಹಲಿಯ ತಾಹಿರ್‌ಪುರದಲ್ಲಿರುವ ಸಿಯೋನ್ ಪ್ರಾರ್ಥನಾ ಭವನದಲ್ಲಿ ಭಾನುವಾರ ಬೆಳಗ್ಗೆ 10 ಗಂಟೆ ವೇಳೆಗೆ ಪ್ರಾರ್ಥನೆ ನಡೆಸುತ್ತಿದ್ದಾಗ ಕೆಲ ಹಿಂದೂ ಸಂಘಟನೆಗಳ ಸದಸ್ಯರು ಚರ್ಚ್‍ಗೆ ನುಗ್ಗಿ ದಾಂಧಲೆ ನಡೆಸಿದ್ದಾರೆ ಮತ್ತು ಆವರಣದೊಳಗೆ ಘೋಷಣೆಗಳನ್ನು ಕೂಗಿದ್ದಾರೆ ಎಂದು ಪೊಲೀಸ್ ದೂರಿನಲ್ಲಿ ಆರೋಪಿಸಲಾಗಿದೆ.

ಪ್ರಾರ್ಥನೆಯ ನೆಪದಲ್ಲಿ ಹಿಂದೂ ಧರ್ಮದ ಬಗ್ಗೆ ಆಕ್ಷೇಪಾರ್ಹ ಭಾಷೆ ಬಳಸಲಾಗಿದೆ ಎಂದು ದಾಳಿಯಲ್ಲಿ ಭಾಗಿಯಾಗಿರುವ ಹಿಂದೂ ಸಂಘಟನೆಗಳು ಆರೋಪಿಸಿವೆ. ಘಟನೆಯಲ್ಲಿ ಒಬ್ಬ ವ್ಯಕ್ತಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಚರ್ಚ್‍ನಲ್ಲಿ ಗಲಾಟೆ ಸೃಷ್ಟಿಸಿದ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಚರ್ಚ್‍ನಲ್ಲಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

Comments (0)
Add Comment