ಹಿಂದೂ ಅಪ್ರಾಪ್ತ ಬಾಲಕಿಯೊಂದಿಗೆ ಓಡಿಹೋದ ಮಗ – ಮುಸ್ಲಿಂ ದಂಪತಿಯನ್ನು ಬರ್ಬರವಾಗಿ ಕೊಂದ ಗುಂಪು.!

ಲಕ್ನೋ: ಮುಸ್ಲಿಂ ಯುವಕನೋರ್ವ ಹಿಂದೂ ಅಪ್ರಾಪ್ತ ಬಾಲಕಿಯೊಂದಿಗೆ ಓಡಿಹೋದ ಹಿನ್ನೆಲೆಯಲ್ಲಿ ಗುಂಪೊಂದು ಯುವಕನ ತಂದೆ-ತಾಯಿಯನ್ನು ಕಬ್ಬಿಣದ ರಾಡ್‌ಗಳಿಂದ ಹೊಡೆದು ಕೊಂದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಉತ್ತರ ಪ್ರದೇಶದ ಸೀತಾಪುರ ನಿವಾಸಿಗಳಾದ ಅಬ್ಬಾಸ್ ಮತ್ತು ಕಮರುಲ್ ನಿಶಾ ಕೊಲೆಯಾದ ದಂಪತಿ. ಬಾಲಕಿಯು ಹಲ್ಲೆ ನಡೆಸಿದವರಲ್ಲಿ ಒಬ್ಬನ ಮಗಳಾಗಿದ್ದಾಳೆ. ಈ ಸಂಬಂಧ ಮಾಹಿತಿ ನೀಡಿರುವ ಸೀತಾಪುರ ಪೊಲೀಸ್ ವರಿಷ್ಠಾಧಿಕಾರಿ ಚಕ್ರೇಶ್ ಮಿಶ್ರಾ, ಕೆಲವು ವರ್ಷಗಳ ಹಿಂದೆ ಅಬ್ಬಾಸ್ ಅವರ ಮಗ ಶೌಕತ್ ಅನ್ಯ ಧರ್ಮದ ಅಪ್ರಾಪ್ತ ಬಾಲಕಿ ರೂಬಿ ಎಂಬಾಕೆಯೊಂದಿಗೆ ಓಡಿ ಹೋಗಿದ್ದ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಶೌಕತ್‌ನನ್ನು ಜೈಲಿಗೆ ಕಳುಹಿಸಲಾಗಿದೆ. ಈ ನಡುವೆ ಶೌಕತ್ ಕೆಲ ದಿನಗಳ ಹಿಂದೆ ಜೈಲಿನಿಂದ ಬಿಡುಗಡೆಯಾಗಿದ್ದು, ಬಾಲಕಿಯ ಮನೆಯವರು ಆತನ ಮೇಲೆ ದಾಳಿ ನಡೆಸಲು ಯೋಜನೆ ರೂಪಿಸಿದ್ದರು. ಶುಕ್ರವಾರ ಸೀತಾಪುರದ ರಾಜೇಪುರದಲ್ಲಿ ದಂಪತಿ ತಮ್ಮ ಮನೆಯಲ್ಲಿದ್ದಾಗ ಐವರಿದ್ದ ಗುಂಪೊಂದು ಮನೆಗೆ ನುಗ್ಗಿ ಕಬ್ಬಿಣದ ರಾಡ್ ಮತ್ತು ದೊಣ್ಣೆಗಳಿಂದ ಹಲ್ಲೆ ನಡೆಸಿದೆ. ಗಂಭೀರವಾಗಿ ಗಾಯಗೊಂಡಿದ್ದ ದಂಪತಿ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ’ ಎಂದು ಮಾಹಿತಿ ನೀಡಿದ್ದಾರೆ. ಈ ಸಂಬಂಧ ಹರಗಾಂವ್ ಪೊಲೀಸರು ತನಿಖೆ ಆರಂಭಿಸಿದ್ದು, ಮೂವರನ್ನು ಬಂಧಿಸಿದ್ದಾರೆ. ತಲೆಮರೆಸಿಕೊಂಡಿರುವ ಆರೋಪಿಗಾಗಿ ಶೋಧ ಮುಂದುವರಿದಿದೆ.

Comments (0)
Add Comment