₹ 25 ಕೋಟಿ ಕೊಡ್ತೀನಿ ಆತ್ಮಹತ್ಯೆ ಮಾಡಿಕೊಳ್ತಿಯಾ?: ಡಿಕೆಶಿಗೆ ಶಾಸಕ ಬಸನಗೌಡ ಸವಾಲು

ರಾಯಚೂರು, ಸೆಪ್ಟೆಂಬರ್ 09: ‘₹5 ಲಕ್ಷ ಸಿಗುವ ಕಾರಣಕ್ಕೆ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವರೊಬ್ಬರು ಹೇಳಿಕೆ ನೀಡಿರುವುದು ಖಂಡನೀಯ. ನಾನು ಆ ಮಂತ್ರಿಗೆ ₹5 ಕೋಟಿ ಕೊಡ್ತೀನಿ ಆತ್ಮಹತ್ಯೆ ಮಾಡಿಕೊಳ್ತಾರಾ’ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಸವಾಲು ಹಾಕಿದರು.

ಕಾಂಗ್ರೆಸ್‌ ನಾಯಕರು ಬೇಜಾಬ್ದಾರಿಯಿಂದ ಮಾತನಾಡಿದ್ದಾರೆ. ₹ 5 ಲಕ್ಷಕ್ಕೆ ಯಾರಾದರೂ ಆತ್ಮಹತ್ಯೆ ಮಾಡಿಕೊಳ್ತಾರಾ? ಎಂದು ಮಾಧ್ಯಮ ಪ್ರತಿನಿಧಿಗಳಿಗೆ ಶುಕ್ರವಾರ ಇಲ್ಲಿ ಪ್ರತಿಕ್ರಿಯಿಸಿದರು.

ನಾನು ಡಿ.ಕೆ. ಶಿವಕುಮಾರ್‌ಗೂ ಚಾಲೆಂಜ್ ಮಾಡ್ತಿನಿ. ನೀನು ಬಹಳ ಶ್ರೀಮಂತ ಇದ್ದಿಯಾ. ನಿನಗೆ ₹25 ಕೋಟಿ ಕೊಡ್ತೀನಿ, ನೀನು ಆತ್ಮಹತ್ಯೆ ಮಾಡಿಕೊಳ್ತಿಯಾ? ಹಣಕ್ಕಾಗಿ ಆತ್ಮಹತ್ಯೆ ಮಾಡಿಕೊ‌ ನೋಡೊಣ’ ಎಂದು ಏಕವಚನದಲ್ಲೇ ವಾಗ್ದಾಳಿ ನಡೆಸಿದರು.

‘ಜೀವನದಲ್ಲಿ‌ ಇನ್ನು ಸುಧಾರಿಸಲು ಸಾಧ್ಯವಿಲ್ಲ ಎಂದು ಮನನೊಂದು ಕೊನೆಗೆ ದಾರಿ ಇಲ್ಲದೆ ರೈತ ಮತ್ತು ಆತನ ಕುಟುಂಬದವರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಆದರೆ, ಕಾಂಗ್ರೆಸ್‌ನವರು ಬಹಳ ಹಗುರವಾಗಿ ಮಾತನಾಡಿದ್ದಾರೆ. 135 ಸೀಟು ಬಂದ ಮೇಲೆ ಕಾಂಗ್ರೆಸ್‌ನವರಿಗೆ ಅಹಂಕಾರ ಬಂದಿದೆ. ಆಕಾಶಕ್ಕೆ ಏರಿದ್ದಾರೆ. ಇಂದಿರಾ ಗಾಂಧಿ ಅವರಂಥ ಸರ್ವಾಧಿಕಾರಿಗೇ ಪ್ರಜಾಪ್ರಭುತ್ವದಲ್ಲಿ ಉಳಿಯಲು ಆಗಲಿಲ್ಲ. ಇನ್ನು ಉಳಿದವರೇನು ಮಹಾ’ ಎಂದು ಟೀಕಿಸಿದರು.

 

Comments (0)
Add Comment