ಆಸ್ತಿ ಆಸೆಗೆ 5 ತಿಂಗಳ ಹಸುಗೂಸನ್ನೇ ಬಲಿ ಪಡೆದ ಪಾಪಿ ಮಹಿಳೆ..!

ಸ್ವಾರ್ಥಿ ಮಹಿಳೆ, ತನಗೆ ಹಾಗೂ ತನ್ನ ಮಕ್ಕಳಿಗೆ ಆಸ್ತಿಯಲ್ಲಿ ಪಾಲು ಕಡಿಮೆಯಾಗುತ್ತದೆ ಎಂದು 5 ತಿಂಗಳ ಹಸುಗೂಸನ್ನೇ ಅಮಾನುಷವಾಗಿ ಕೊಂದಿದ್ದಾಳೆ.

ಮಗು ಕುಡಿಯುವ ಹಾಲಿಗೆ ವಿಷ ಬೆರೆಸಿ ಐದು ತಿಂಗಳ ಹಸುಗೂಸನ್ನೇ ಬಲಿ ಪಡೆದಿದ್ದಾಳೆ ಈ ಕಿರಾತಕಿ.

ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಬಬಲಾದ ಗ್ರಾಮದಲ್ಲಿ ಸಿದ್ದಪ್ಪ ಚೆಟ್ಟಿಗೇರಿ ಎಂಬಾತ 11 ವರ್ಷಗಳ ಹಿಂದೆ ಮೊದಲು ಶ್ರೀದೇವಿಯನ್ನ ಮದುವೆಯಾಗಿದ್ದ.

ಆದರೆ ಮಕ್ಕಳಾಗದ ಹಿನ್ನೆಲೆ ಕಳೆದ‌ 7 ವರ್ಷದ ಹಿಂದೆ ದೇವಮ್ಮಳನ್ನು ಮದುವೆಯಾಗಿದ್ದ.

ದೇವಮ್ಮಳನ್ನು ಮದುವೆಯಾದ ನಂತರ ಗಂಡನ ಮನೆ ಬಿಟ್ಟು ಚಾಮನಳ್ಳಿಯ ತನ್ನ ತವರು ಮನೆಯಲ್ಲಿ ಶ್ರೀದೇವಿ ವಾಸವಿದ್ದಳು.

ಕಳೆದ ಮೂರು ವರ್ಷಗಳ ಹಿಂದೆ ಮಧ್ಯಪ್ರವೇಶಿಸಿದ ಹಿರಿಯರು, ರಾಜಿ ಸಂಧಾನ ನಡೆಸಿದ್ದಾರೆ.

ಇದಾದ ನಂತರ ಆಕೆ ಬಬಲಾದ ಗ್ರಾಮದ ಗಂಡನ ಮನೆಗೆ ಬಂದಿದ್ದಳು.

ಕಳೆದ ಐದು ತಿಂಗಳ ಹಿಂದೆ ಹೆಣ್ಣು ಮಗು ಜನಿಸಿತ್ತು.

ಆದರೆ ಅದಾಗಲೇ ಆರೋಪಿ ದೇವಮ್ಮಳಿಗೆ ನಾಲ್ಕು ಜನ ಮಕ್ಕಳಿದ್ದರು.

ಇದೀಗ ಶ್ರೀದೇವಿಗೆ ಮಗು ಜನಿಸಿದ್ದು ಇದರಿಂದಾಗಿ ಆಸ್ತಿ ಪಾಲಾಗುವಾಗ ತನಗೆ ಕಡಿಮೆ ಆಸ್ತಿ ಸಿಗಲಿದೆ ಎಂದು ನಂಬಿದ ದೇವಮ್ಮ, ಕೊಲೆ ಮಾಡುವ ಹೀನ ಕೃತ್ಯಕ್ಕೆ ಇಳಿದಿದ್ದಾಳೆ.

ತನಗೂ ತನ್ನ ಮಕ್ಕಳಿಗೂ ಆಸ್ತಿಯಲ್ಲಿ ಪಾಲು ತಪ್ಪಬಹುದು ಎಂದು ದೇವಮ್ಮ ವಿಷ ಉಣಿಸಿದ್ದಾಳೆ.

ಐದು ತಿಂಗಳ ಹಸುಗೂಸು ಸಂಗೀತಾಳಿಗೆ ಆಕೆಯ ತಾಯಿ ಎದೆಹಾಲು ಉಣಿಸುವಾಗ, ದೇವಮ್ಮ ಬಲವಂತವಾಗಿ ಮಗುವನ್ನು ಎಳೆದೊಯ್ದಿದ್ದಾಳೆ.

ನಂತರ ಆಕೆ, ಮನೆಯ ರೂಮಿಗೆ ಕರೆದುಕೊಂಡು ಹೋಗಿ ಬಾಗಿಲು ಮುಚ್ಚಿದ್ದಾಳೆ.

ತಕ್ಷಣ ಆಕೆ, ಹಾಲಿನ ಬಾಟಲ್ನಲ್ಲಿ ವಿಷ ಬೆರೆಸಿದ್ದು, ಅದನ್ನು ಕೂಸಿಗೆ ಕುಡಿಸಿದ್ದಾಳೆ.

ವಿಷಬೆರೆತ ಹಾಲು ಕುಡಿದ ಮೂರು ಗಂಟೆಯ ನಂತರ ಮಗುವಿನ ಬಾಯಲ್ಲಿ ನೊರೆ ಬಂದಿದೆ.

ಇದರಿಂದ ಗಾಬರಿಗೊಳಗಾದ ತಾಯಿ ಶ್ರೀದೇವಿ, ಚಿಕಿತ್ಸೆ ಕೊಡಿಸಲು ಆಸ್ಪತ್ರೆಗೆ ಧಾವಿಸಿದ್ದಾಳೆ ಆದರೂ ಮಾರ್ಗಮಧ್ಯೆ ಮಗು ಸಾವಿಗೀಡಾಗಿದೆ.

ಸದ್ಯ ವಡಗೇರಾ ಪೊಲೀಸ್‍ ಠಾಣೆಯಲ್ಲಿ ಮಗು ಮೃತಪಟ್ಟಿರುವ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಆರೋಪಿ ದೇವಮ್ಮಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ತನಿಖೆ ನಡೆಸುತ್ತಿದ್ದಾರೆ.

Comments (0)
Add Comment