ಕಾಂತಾರದಲ್ಲಿ ದೈವದ ಅಣಕು ವೇಷ ಹಾಕಿರುವ ರಿಷಬ್ ಶೆಟ್ಟಿ ಮೇಲೆ ದಲಿತ ದೌರ್ಜನ್ಯ ಪ್ರಕರಣ ದಾಖಲಿಸಿ..!

ಮಂಗಳೂರು : ಸಿನೆಮಾ ನಾಟಕಗಳಲ್ಲಿ ದೈವದ ವೇಷಹಾಕಿರುವ ನಟರ ಮೇಲೆ ದಲಿತ ದೌರ್ಜನ್ಯ ಪ್ರಕರಣ ದಾಖಲಿಸಬೇಕೆಂದು ದಕ್ಷಿಣ ಕನ್ನಡ ತುಳುನಾಡು ದೈವಾರಾಧನಾ ಸಂರಕ್ಷಣಾ ವೇದಿಕೆ ಒತ್ತಾಯಿಸಿದೆ.

ಗುರುವಾರ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರಿಗೆ ಮನವಿ ಸಲ್ಲಿಸಿದ ವೇದಿಕೆ ಸದಸ್ಯರು, ಮುಂದೆ ತೆರೆ ಕಾಣಲಿರುವ ಕಾಂತಾರ–2 ಸಿನಿಮಾ ಪ್ರದರ್ಶನಕ್ಕೆ ತಡೆಯೊಡ್ಡಬೇಕು. ‘ಕಾಂತಾರ’ ಸಿನಿಮಾದಲ್ಲಿ ದೈವದ ಅಣಕು ವೇಷ ಹಾಕಿರುವ ರಿಷಬ್ ಶೆಟ್ಟಿ, ‘ಶಿವದೂತ ಗುಳಿಗೆ’ ನಾಟಕದಲ್ಲಿ ದೈವದ ಅಣಕು ವೇಷ ಧರಿಸಿರುವ ಸ್ವರಾಜ್, ‘ಕಾವೇರಿ’ ಧಾರಾವಾಹಿಯಲ್ಲಿ ದೈವದ ಅಣಕು ವೇಷ ಧರಿಸಿರುವ ಪ್ರಶಾಂತ್ ಸಿ.ಕೆ. ಅವರ ಮೇಲೆ ದಲಿತ ದೌರ್ಜನ್ಯ ಪ್ರಕರಣ ದಾಖಲಿಸಿ, ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.

ಇತ್ತೀಚಿನ ದಿನಗಳಲ್ಲಿ ಸಿನಿಮಾ, ಯಕ್ಷಗಾನ, ನಾಟಕ, ಧಾರಾವಾಹಿ, ಪ್ರತಿಭಾ ಕಾರಂಜಿ, ಮನರಂಜನಾ ಕಾರ್ಯಕ್ರಮ ಮೊದಲಾದ ಸಾರ್ವಜನಿಕ ವೇದಿಕೆಗಳಲ್ಲಿ ದೈವದ ವೇಷ ತೊಟ್ಟು ಕುಣಿಯುವ ದೃಶ್ಯಗಳು ಕಾಣುತ್ತಿವೆ. ಇದನ್ನು ತಡೆಗಟ್ಟಲು ಕ್ರಮ ವಹಿಸಬೇಕು ಎಂದು ದಕ್ಷಿಣ ಕನ್ನಡ ತುಳುನಾಡು ದೈವಾರಾಧನಾ ಸಂರಕ್ಷಣಾ ವೇದಿಕೆ ಒತ್ತಾಯಿಸಿದೆ. ಪರಿಶಿಷ್ಟರು ನಂಬಿಕೊಂಡು ಬಂದಿರುವ ದೈವವನ್ನು ಈ ರೀತಿ ಅವಮಾನಿಸುವುದರಿಂದ ತಲೆತಲಾಂತರಗಳಿಂದ ಬಂದ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗುತ್ತಿದೆ. ‘ಕಾಂತಾರ’ ಸಿನಿಮಾ ಹಾಗೂ ‘ಶಿವದೂತ ಗುಳಿಗೆ’ ನಾಟಕಗಳು ದೈವ ನಿಂದನೆ ಹೆಚ್ಚಲು ಕಾರಣವಾಗಿವೆ. ಈ ರೀತಿ ದೈವದ ಅಣಕು ಮಾಡುವುದರಿಂದ ದೈವದ ಚಾಕರಿ ಮಾಡುವ ಪರಿಶಿಷ್ಟ ಸಮುದಾಯದವರ ಮೂಲ ಆರಾಧನಾ ಕುಲಕಸುಬಿಗೆ ಕುಂದುಂಟಾಗುತ್ತಿದೆ ಎಂದು ಮನವಿಯಲ್ಲಿ ಅವರು ತಿಳಿಸಿದ್ದಾರೆ.

Comments (0)
Add Comment