ಕಾರು ಅಪಘಾತ: ಬಿಆರ್ ಎಸ್ ಶಾಸಕಿ ಸಾವು

ಹೈದರಾಬಾದ್ : ರಸ್ತೆ ಬದಿಯ ತಡೆಗೊಡೆದೆ ಕಾರು ಡಿಕ್ಕಿ ಹೊಡೆದ ಪರಿಣಾಮ ಭಾರತ್ ರಾಷ್ಟ್ರ ಸಮಿತಿಯ ಶಾಸಕಿ ಜಿ ಲಾಸ್ಯ ನಂದಿತಾ(37) ಸಾವನಪ್ಪಿದ್ದಾರೆ. ಈ ಘಟನೆ ಇಂದು ಬೆಳಗ್ಗೆ 6.30ರ ಸುಮಾರಿಗೆ ಹೈದರಾಬಾದ್‌ನ ಹೊರವಲಯದಲ್ಲಿರುವ ತೆಲಂಗಾಣದ ಸಂಗಾರೆಡ್ಡಿ ಜಿಲ್ಲೆಯ ಪಟಂಚೇರು ಎಂಬಲ್ಲಿ ಸಂಭವಿಸಿದೆ.

ಲಾಸ್ಯ ನಂದಿತಾ ತಮ್ಮ ಎಸ್‌ಯುವಿ ಕಾರಿನಲ್ಲಿ ನಗರಕ್ಕೆ ವಾಪಸ್ಸಾಗುತ್ತಿದ್ದ ವೇಳೆ ಕಾರು ಚಾಲಕನ ನಿಯಂತ್ರಣ ತಪ್ಪಿ ಎಕ್ಸ್‌ಪ್ರೆಸ್‌ವೇಯ ಎಡಭಾಗದಲ್ಲಿರುವ ಲೋಹದ ತಡೆಗೋಡೆಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಗಂಭೀರ ಗಾಯಗೊಂಡು ಶಾಸಕಿ ಸ್ಥಳದಲ್ಲಿಯೇ ಕೊನೆಯುಸಿರೆಳೆದಿದ್ದಾರೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಘಟನೆಯಲ್ಲಿ ಗಂಭೀರ ಗಾಯಗೊಂಡಿರುವ ಕಾರು ಚಾಲಕನನ್ನು ಸಮೀಪದ ಪಟಂಚೇರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸ್ಥಿತಿ ಚಿಂತಾಜನಕವಾಗಿದೆ ಎನ್ನಲಾಗಿದೆ. ಬಿಆರ್‌ಎಸ್‌ನ ಮಾಜಿ ಶಾಸಕ ದಿವಂಗತ ಜಿ ಸಾಯಣ್ಣ ಅವರ ಪುತ್ರಿಯಾಗಿರುವ ನಂದಿತಾ ಅವರು ಕಳೆದ ನವೆಂಬರ್‌ನಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಸಿಕಂದರಾಬಾದ್ ಕಂಟೋನ್ಮೆಂಟ್ ಕ್ಷೇತ್ರದಿಂದ ಜಿ ವೆನ್ನೆಲ ಅವರನ್ನು ಸೋಲಿಸುವ ಮೂಲಕ ಅಧಿಕಾರದ ಗದ್ದುಗೆ ಏರಿದ್ದರು.

Comments (0)
Add Comment