ಕುವೈತ್ ಎಮಿರ್ ನಿಧನ : ಭಾರತದಲ್ಲಿ ಒಂದು ದಿನದ ‘ಶೋಕಾಚರಣೆ’ ಕೇಂದ್ರ ಸರ್ಕಾರ ಘೋಷಣೆ

ದೆಹಲಿ : ಕುವೈತ್ ದೊರೆ ಎಮಿರ್ ಶೇಖ್ ನವಾಫ್ ಅಲ್ ಅಹ್ಮದ್ ಅಲ್-ಸಬಾಹ್ ಅವರ ನಿಧನದ ಹಿನ್ನೆಲೆಯಲ್ಲಿ ಭಾರತ ಸರ್ಕಾರವು 2023 ರ ಡಿಸೆಂಬರ್ 17 ರಂದು ಭಾರತದಾದ್ಯಂತ ಒಂದು ದಿನದ ರಾಜ್ಯ ಶೋಕಾಚರಣೆ ನಡೆಸಲು ನಿರ್ಧರಿಸಿದೆ ಎಂದು ಗೃಹ ಸಚಿವಾಲಯ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ. ಹೌದು ಕೇಂದ್ರ ಸರ್ಕಾರ ಭಾನುವಾರ ಒಂದು ದಿನದ ಶೋಕಾಚರಣೆಯನ್ನು ಘೋಷಿಸಿದೆ.

ಈ ಸಮಯದಲ್ಲಿ ರಾಷ್ಟ್ರಧ್ವಜವು ಅರ್ಧಮಟ್ಟದಲ್ಲಿ ಹಾರಾಡುತ್ತದೆ. ಈ ಅವಧಿಯಲ್ಲಿ ಯಾವುದೇ ಮನರಂಜನಾ ಕಾರ್ಯಗಳು ಇರುವುದಿಲ್ಲ ಎಂದು ತಿಳಿಸಿದೆ. ಕುವೈತ್ ನ ಎಮಿರ್ ಶೇಖ್ ನವಾಫ್ ಅಲ್ ಅಹ್ಮದ್ ಅಲ್ ಜಾಬರ್ ಅಲ್ ಸಬಾಹ್ (86) ನಿಧನರಾಗಿದ್ದಾರೆ. ಕುವೈತ್ನ ರಾಜ್ಯ ಟೆಲಿವಿಷನ್ ಶನಿವಾರ (ಡಿಸೆಂಬರ್ 16) ಈ ಮಾಹಿತಿಯನ್ನು ನೀಡಿದೆ. ಉಸಿರಾಟದ ಸಮಸ್ಯೆಯಿಂದಾಗಿ ಅವರನ್ನು ಇತ್ತೀಚೆಗೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕುವೈತ್ ದೊರೆ ಎಮಿರ್ ಶೇಖ್ ನವಾಫ್ ಅಲ್ ಅಹ್ಮದ್ ಅಲ್-ಸಬಾಹ್ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ. “ಶೇಖ್ ನವಾಫ್ ಅವರ ದುರದೃಷ್ಟಕರ ನಿಧನದ ಸುದ್ದಿ ತಿಳಿದು ತೀವ್ರ ದುಃಖವಾಗಿದೆ. ರಾಜಮನೆತನ ಮತ್ತು ಕುವೈತ್ ಜನತೆಗೆ ನಮ್ಮ ಆಳವಾದ ಸಂತಾಪವನ್ನು ವ್ಯಕ್ತಪಡಿಸುತ್ತೇವೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

Comments (0)
Add Comment