ಕೇರಳದ ವೈದ್ಯ ದಂಪತಿ, ಅವರ ಸ್ನೇಹಿತೆ ಅರುಣಾಚಲದ ಹೋಟೆಲ್ ಕೋಣೆಯಲ್ಲಿ ಶವವಾಗಿ ಪತ್ತೆ..!

ಇಟಾನಗರ: ಕೇರಳದ ಆಯುರ್ವೇದ ವೈದ್ಯ ದಂಪತಿ ಮತ್ತು ಅವರ ಸ್ನೇಹಿತ ಅರುಣಾಚಲ ಪ್ರದೇಶದ ಝಿರೋ ಪಟ್ಟಣದ ಹೋಟೆಲ್‌ವೊಂದರಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.

ಮೃತರನ್ನು ಕೊಟ್ಟಾಯಂ ಜಿಲ್ಲೆಯ ಆಯುರ್ವೇದ ವೈದ್ಯರಾದ ನವೀನ್ ಥಾಮಸ್, ಅವರ ಪತ್ನಿ ದೇವಿ ಬಿ ಎಂದು ಗುರುತಿಸಲಾಗಿದೆ. ಮೂರನೇ ವ್ಯಕ್ತಿಯನ್ನು ಶಾಲಾ ಶಿಕ್ಷಕಿ ಹಾಗೂ ತಿರುವನಂತಪುರಂ ನಿವಾಸಿ ಆರ್ಯ ಬಿ ನಾಯರ್ (29) ಎಂದು ಗುರುತಿಸಲಾಗಿದೆ.

ಆತ್ಮಹತ್ಯೆ ಪತ್ರದಲ್ಲಿ ಬರೆದಿರುವ ಸಂದೇಶದಿಂದಾಗಿ ದಂಪತಿಯು “ಮಾಟಮಂತ್ರಕ್ಕೆ ಬಲಿಯಾಗಿದ್ದಾರೆ” ಎಂದು ಪೊಲೀಸರು ಶಂಕಿಸಿದ್ದಾರೆ ಎಂದು ಕೆಲವು ವರದಿಗಳು ತಿಳಿಸಿವೆ.

ನವೀನ್ ಥಾಮಸ್ ದಂಪತಿ ಹಾಗೂ ಅವರ ಸ್ನೇಹಿತೆ ಮಾರ್ಚ್ 28 ರಂದು ಹೋಟೆಲ್‌ನಲ್ಲಿ ರೂಮ್‌ ಪಡೆದುಕೊಂಡಿದ್ದರು. ಅದಾದ ಬಳಿಕ ಅವರು ಕೊಠಡಿಯಿಂದ ಹೊರಗೆ ಬಂದಿರಲಿಲ್ಲ.

ಈ ಹಿನ್ನಲೆಯಲ್ಲಿ ಹೋಟೆಲ್ ಸಿಬ್ಬಂದಿ ಕೊಠಡಿ ಬೀಗ ಮುರಿದು ಪರಿಶೀಲಿಸಿದ್ದಾರೆ. ಈ ವೇಳೆ ಅವರ ಮೃತದೇಹಗಳು ಪತ್ತೆಯಾಗಿವೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದಾರೆ.

Comments (0)
Add Comment