ಗರ್ಲ್‌ ಫ್ರೆಂಡ್ ಮೇಲೆ ಕಾರು ಹರಿಸಿ ಕೈ, ಕಾಲು ಮುರಿದ IAS ಅಧಿಕಾರಿ ಮಗ

ಮುಂಬೈ: ತನ್ನ ಗೆಳತಿಯ ಮೇಲೆ ಬಾಯ್‌ಫ್ರೆಂಡ್‌ ಕಾರು ಹರಿಸಿ ಕೈ, ಕಾಲು ಮುರಿದಿರೋ ಅಮಾನುಷ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ಗಂಭೀರವಾಗಿ ಗಾಯಗೊಂಡಿರುವ ಪ್ರಿಯಾ ಸಿಂಗ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಪ್ರಿಯಾ ಸಿಂಗ್ ಮೇಲೆ ಕಾರು ಹರಿಸಿದ ಬಾಯ್ ಫ್ರೆಂಡ್ ಅಶ್ವಜಿತ್ ಗಾಯಕವಾಡ್‌ ಎಂದು ಗುರುತಿಸಲಾಗಿದೆ. ಮುಂಬೈ ಥಾಣೆಯ ಕಾಸರವಾಡದ ಪೊಲೀಸ್ ಠಾಣೆಯಲ್ಲಿ ಈತನ ವಿರುದ್ಧ ಪ್ರಿಯಾ ಸಿಂಗ್ ದೂರು ದಾಖಲಿಸಿದ್ದಾರೆ.

ಅಶ್ವಜಿತ್ ನಿಂದ ಗಾಯಗೊಂಡಿರುವ ಪ್ರಿಯಾ ಸಿಂಗ್ ಅವರು ಸೋಷಿಯಲ್ ಮೀಡಿಯಾದಲ್ಲಿ ಸಖತ್ ಫೇಮಸ್ ಆಗಿದ್ದರು. ಸೋಷಿಯಲ್ ಮೀಡಿಯಾ ಇನ್‌ ಫ್ಲೂಯೆನ್ಸರ್‌ ಆಗಿರುವ ಪ್ರಿಯಾ ಸಿಂಗ್ ಪರಿಚಯ ಮಾಡಿಕೊಂಡಿದ್ದ ಅಶ್ವಜಿತ್ ಸ್ನೇಹಿತನಾಗಿದ್ದ. ಅಶ್ವಜಿತ್ ಗಾಯಕವಾಡ್ ಅವರ ತಂದೆ ಅನಿಲ್ ಗಾಯಕವಾಡ್ IAS ಆಫೀಸರ್‌ ಆಗಿದ್ದು, ಮಹಾರಾಷ್ಟ್ರದ ಸಾರಿಗೆ ನಿಗಮದಲ್ಲಿ ಜಂಟಿ ಎಂಡಿ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.

ಕಳೆದ ಡಿಸೆಂಬರ್ 11ರಂದು ಹೋಟೆಲ್‌ ನಿಂದ ಹೊರಗೆ ಬಂದಾಗ ಅಶ್ವಜಿತ್ ಹಾಗೂ ಪ್ರಿಯಾ ಸಿಂಗ್ ನಡುವೆ ಗಲಾಟೆ ನಡೆದಿದೆ. ಈ ವೇಳೆ ಪ್ರಿಯಾ ಸಿಂಗ್ ಮೇಲೆ ಅಶ್ವಜಿತ್ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ. ಬಳಿಕ ಆರೋಪಿಯ ಕಾರಿನಿಂದ ಪ್ರಿಯಾ ಸಿಂಗ್‌ ತನ್ನ ಬ್ಯಾಗ್ ತರಲು ಹೋಗಿದ್ದಾರೆ. ಈ ವೇಳೆ ಪ್ರಿಯಾ ಸಿಂಗ್ ಮೇಲೆ ಅಶ್ವಜಿತ್ ಸ್ನೇಹಿತ ಕಾರ್ ಹರಿಸಿದ್ದಾನಂತೆ. ಅಶ್ವಜಿತ್ ಗಾಯಕ್‌ವಾಡ್ ತನ್ನ ಇಬ್ಬರು ಸ್ನೇಹಿತರ ಜೊತೆ ಸೇರಿ ಪ್ರಿಯಾ ಸಿಂಗ್ ಮೇಲೆ ಕಾರು ಹರಿಸಿ ಹೋಗಿದ್ದಾನೆ ಎಂದು ಆರೋಪಿಸಲಾಗಿದೆ.

ಈ ಘಟನೆಯಿಂದ ಪ್ರಿಯಾ ಅವರ ಹೊಟ್ಟೆ, ಕೈ, ಕಾಲುಗೆ ಗಂಭೀರ ಗಾಯಗಳಾಗಿದೆ. ಬಲಗಾಲು ಮುರಿದಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ತಾನು ಕಂಪ್ಲೇಂಟ್‌ ಕೊಟ್ಟರೂ ಆರೋಪಿಗಳನ್ನು ಇನ್ನೂ ಬಂಧಿಸಿಲ್ಲ ಎಂದು ಪ್ರಿಯಾ ಸಿಂಗ್ ಆರೋಪಿಸಿದ್ದಾರೆ.

ಆದರೆ ಈ ಆರೋಪವನ್ನು ಅಶ್ವಜಿತ್ ಗಾಯಕವಾಡ್ ಅಲ್ಲಗಳೆದಿದ್ದಾರೆ. ಪ್ರಿಯಾ ಸಿಂಗ್ ನನ್ನ ಸ್ನೇಹಿತೆ ಮಾತ್ರ, ಆಕೆ ಗರ್ಲ್ ಫ್ರೆಂಡ್ ಅಲ್ಲ. ಆಕೆಯೇ ನನ್ನೊಂದಿಗೆ ಬಲವಂತವಾಗಿ ಮಾತನಾಡಲು ಯತ್ನಿಸಿದ್ದಳು. ನನ್ನ ಸ್ನೇಹಿತರ ಮೇಲೆ ಆಕೆಯೇ ಹಲ್ಲೆ ಮಾಡಿದ್ದಾಳೆ. ಈ ಅಪಘಾತ ಆಕಸ್ಮಿಕವಾಗಿದ್ದು ಉದ್ದೇಶಪೂರ್ವಕವಲ್ಲ ಎಂದಿದ್ದಾರೆ. ದೂರು ದಾಖಲಿಸಿರುವ ಪೊಲೀಸರು ಆರೋಪಿಗಳನ್ನು ಬಂಧಿಸಲು ಮೀನಾಮೇಷ ಎಣಿಸುತ್ತಿದ್ದಾರೆ ಎನ್ನಲಾಗಿದೆ.

Comments (0)
Add Comment