ಚಕ್ಕುಲಿ ಗಂಟಲಲ್ಲಿ ಸಿಲುಕಿ ಒಂದೂವರೆ ವರ್ಷದ ಮಗು ಮೃತ್ಯು

ತಿರುವನಂತಪುರಂ: ಚಕ್ಕುಲಿ ಗಂಟಲಲ್ಲಿ ಸಿಲುಕಿಕೊಂಡು ಒಂದೂವರೆ ವರ್ಷದ ಮಗು ಮೃತಪಟ್ಟ ಘಟನೆ ಕೇರಳದಲ್ಲಿ ನಡೆದಿದೆ. ಈ ಘಟನೆ ಇಂದು ಬೆಳಗ್ಗೆ 9.30ರ ಸುಮಾರಿಗೆ ನಡೆದಿದೆ.

ಮೃತ ಬಾಲಕನನ್ನು ವೈಷ್ಣವ್ ಎಂದು ಗುರುತಿಸಲಾಗಿದೆ. ಮೃತ ವೈಷ್ಣವ್, ಮಂಕಂಕುಜಿ ಮಲಯಿಲ್ ಪಾಡೆತತ್ತಿಲ್ ಹೌಸ್‍ನ ವಿಜೀಶ್ ಮತ್ತು ದಿವ್ಯಾ ದಾಸ್ ಅವರ ಅವಳಿ ಮಕ್ಕಳಲ್ಲಿ ಒಬ್ಬ.

ಘಟನೆ ವೇಳೆ ಮಗು ಹಾಗೂ ಆತನ ತಾಯಿ ಮಾತ್ರ ಮನೆಯಲ್ಲಿ ಇದ್ದರು. ಮಗುವಿನ ತಂದೆ ವೃತ್ತಿಯಲ್ಲಿ ಕಾರ್ಪೆಂಟರ್ ಆಗಿದ್ದು, ಪಾಲಕ್ಕಾಡ್‍ನಲ್ಲಿರುವ ತಮ್ಮ ಸಂಬಂಧಿಕರ ಮನೆಗೆ ಕೆಲಸಕ್ಕೆ ತೆರಳಿದ್ದರು.

ಬಾಲಕ ಚಕ್ಕುಲಿ ತಿಂದುಕೊಂಡು ಆಟವಾಡುತ್ತಿದ್ದ ವೇಳೆ ಏಕಾಏಕಿ ನುಂಗಿದ್ದಾನೆ. ಪರಿಣಾಮ ಚಕ್ಕುಲಿ ಗಂಟಲಲ್ಲಿ ಸಿಲುಕಿಕೊಂಡು ಉಸಿರಾಡಲು ಸಾಧ್ಯವಾಗುತ್ತಿರಲಿಲ್ಲ. ಕೂಡಲೇ ಆತನನ್ನು ಕೊಲ್ಲಂನಲ್ಲಿರುವ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಆದರೆ ವೈಷ್ಣವ್‍ ಜೀವ ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ.ಅವಳಿ ಸಹೋದರಿ ವೈಗಾ ಹಾಗೂ ತಂದೆ, ತಾಯಿಯನ್ನು ವೈಷ್ಣವ್ ಅಗಲಿದ್ದಾನೆ.

Comments (0)
Add Comment