ಜಮ್ಮು-ಕಾಶ್ಮೀರದಲ್ಲಿ ಮತ್ತೆ ಸೇನಾ ವಾಹನದ ಮೇಲೆ ಉಗ್ರರ ಗುಂಡಿನ ದಾಳಿ

ಶ್ರೀನಗರ: ಜಮ್ಮು ಕಾಶ್ಮೀರದ ಪೂಂಛ್ ಪ್ರದೇಶದಲ್ಲಿ ಉಗ್ರಗಾಮಿಗಳು ಮತ್ತೆ ಸಿಎಒ ಸೇನಾ ವಾಹನದ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಇದಕ್ಕೆ ಪ್ರತಿಯಾಗಿ ಸೈನಿಕರು ಸಹ ಪ್ರತಿದಾಳಿ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಈ ಕುರಿತು ಟ್ವೀಟ್ ಮಾಡಿರುವ ಮೂಲಕ ಮಾಹಿತಿ ಹಂಚಿಕೊಂಡ ಸೇನೆ, ಪೂಂಛ್ ನ ಕೃಷ್ಣ ಘಾಟಿ ಪ್ರದೇಶದ ಬಳಿ ಇರುವ ಬೆಟ್ಟದ ಮೇಲಿಂದ ಸೇನಾ ವಾಹನದ ಮೇಲೆ ಉಗ್ರರು ದಾಳಿ ನಡೆಸಿದ್ದಾರೆ. ಇದರ ಪ್ರತಿಯಾಗಿ ಸೈನಿಕರು ಸಹ ಪ್ರತಿದಾಳಿ ನಡೆಸಿದ್ದಾರೆ. ಇನ್ನು ದಾಳಿ ನಡೆಸಿದ ಸಂದರ್ಭ ಭಯೋತ್ಪಾದಕರು ಕಾಡಿನೊಳಗೆ ಅವಿತು ಕುಳಿತಿರುವ ಶಂಕೆ ಇದೆ ಎನ್ನಲಾಗಿದೆ.

ಇನ್ನು ಎಂದಿನಂತೆ ಭಾರತೀಯ ಸೇನೆ ಮತ್ತು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಉಗ್ರರನ್ನು ಸದೆ ಬಡಿಯಲು ಪ್ರದೇಶವನ್ನು ಸುತ್ತುವರಿದು, ಜಂಟಿಯಾಗಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಸದ್ಯ ಘಟನೆಯಲ್ಲಿ ಯಾವುದೇ ಅನಾಹುತ ಸಂಭವಿಸಿಲ್ಲ ಎಂದು ತಿಳಿಸಿದ್ದಾರೆ.

Comments (0)
Add Comment