ದೊಡ್ಡಪತ್ರೆ ಎಲೆಯ ಉಪಯೋಗ

ಮನೆಯ ಹಿತ್ತಲಿನಲ್ಲಿದ್ದ ಗಿಡವನ್ನೇ ಜ್ವರ, ಶೀತ ಸೇರಿದಂತೆ ಹಲವು ಕಾಯಿಲೆಗಳಿಗೆ ಮದ್ದಾಗಿ ಬಳಸಿಕೊಳ್ಳಬಹುದು. ಇಂತಹ ಔಷಧೀಯ ಸಸ್ಯಗಳಲ್ಲಿ ದೊಡ್ಡಪತ್ರೆಗೆ ಮಹತ್ವದ ಸ್ಥಾನ.

ಇದನ್ನು ಸಾಂಬ್ರಾಣಿ, ಸಂಬಾರಬಳ್ಳಿ, ಅಜವಾನದೆಲೆ, ಕರ್ಪೂರವಳ್ಳಿ, ಚೆಂಪರವಳ್ಳಿ ಹೀಗೆ ಹಲವು ಹೆಸರುಗಳಿಂದ ಕರೆಯುತ್ತೇವೆ. ಎಲೆಗಳು ದಪ್ಪವಾಗಿದ್ದಿ, ನೀರಿನ ಅಂಶ ಹೆಚ್ಚಿರುತ್ತದೆ. ಎಲೆಗಳನ್ನು ಕೊಯ್ದು ಸ್ವಲ್ಪ ಬೆಂಕಿಯಲ್ಲಿ ಬಾಡಿಸಿ ಹಿಂಡಿದರೆ ನೀರು ಸಿಗುತ್ತದೆ.ಮಕ್ಕಳಿಗೆ ಜ್ವರ ಬಂದಾಗ ದೊಡ್ಡಪತ್ರೆಯ ಎಲೆಯನ್ನು ಬಾಡಿಸಿ ನೆತ್ತಿಯ ಮೇಲೆ ಇಟ್ಟರೆ ಜ್ವರ ಇಳಿಯುತ್ತದೆ. ದೊಡ್ಡಪತ್ರೆ ಎಲೆಗಳ ರಸ ಮತ್ತು ಅಷ್ಟೇ ಪ್ರಮಾಣದ ಎಳ್ಳೆಣ್ಣೆಯನ್ನು ನಿತ್ಯ ತಲೆಗೆ ಹಚ್ಚಿಕೊಳ್ಳುವುದರಿಂದ ಕಣ್ಣುರಿ ಕಡಿಮೆಯಾಗುತ್ತದೆ.

ಮೈಯಲ್ಲಿ ಅಲರ್ಜಿಯಿಂದ ಉಂಟಾದ ಬೊಬ್ಬೆಗಳಿದ್ದರೆ ಅದರ ಮೇಲೆ ಸಾಮ್ರಾಣಿ ಎಲೆಗಳನ್ನು ತಿಕ್ಕಿ, ಹುಳು ಕಚ್ಚಿದ ಗಾಯಕ್ಕೂ ಇದು ಅತ್ಯುತ್ತಮ ಮದ್ದು.ಶೀತದ ಲಕ್ಷಣವಾದ ಮೂಗು ಕಟ್ಟುವ ಸಮಸ್ಯೆಯಿದ್ದರೆ ದೊಡ್ಡ ಪತ್ರೆ/ಸಾಮ್ರಾಣಿಯ ರಸವನ್ನು ಮೂಗಿನ ಹೊರಭಾಗದಲ್ಲಿ ಎರಡು ಹನಿ ಬಿಡಿ. ಇದರಿಂದ ಗಾಳಿ ಸರಾಗವಾಗಿ ಒಳಹೊರಗೆ ಹೋಗುವಂತಾಗುತ್ತದೆ.ದೊಡ್ಡ ಪತ್ರೆ ಎಲೆಗಳನ್ನು ಮೊಸರಿನಲ್ಲಿ ಅದ್ದಿ ಮುಖಕ್ಕೆ ತಿಕ್ಕಿಕೊಂಡರೆ ತ್ವಚೆ ಕಾಂತಿಯುತವಾಗುತ್ತದೆ.

ಇದರ ಸೂಪ್ ತಯಾರಿಸಿ ಬಾಣಂತಿಯರಿಗೆ ಸವಿಯಲು ಕೊಟ್ಟರೆ ಎದೆಹಾಲು ಹೆಚ್ಚುತ್ತದೆ. ಕಿವಿ ನೋವಿಗೂ ಇದರ ರಸ ರಾಮ ಬಾಣ ಎನ್ನಲಾಗಿದೆ. ದೊಡ್ಡಪತ್ರೆ ಎಲೆಗಳನ್ನು ಜಜ್ಜಿ ರಸ ತೆಗೆದು ಜೇನಿನೊಂದಿಗೆ ಸೇರಿಸಿ ಕುಡಿಯುವುದರಿಂದ ಕಫ, ಬೇಧಿ ಕಡಿಮೆಯಾಗುತ್ತದೆ. ಪದೇಪದೆ ಮಕ್ಕಳಲ್ಲಿ ಕಾಡುವ ಕಫ ಕೆಮ್ಮು ಶೀತಕ್ಕೆ ನಾಲ್ಕೈದು ಸಾಂಬ್ರಾಣಿ ಎಲೆಗಳನ್ನು ಕೆಂಡದಲ್ಲಿ ಬಾಡಿಸಿ ರಸ ಹಿಂಡಿ ಜೇನು ಬೆರೆಸಿ ಕುಡಿಸಿದರೆ ಕೆಮ್ಮು, ಕಫ ಕಡಿಮೆಯಾಗುತ್ತದೆ.

ಶೀತದಿಂದಾಗಿ ಮಕ್ಕಳಿಗೆ ಮಲಬದ್ಧತೆಯಾದರೆ ಎಲೆಗಳ ರಸದಲ್ಲಿ ಜೇನುತುಪ್ಪ ಬೆರೆಸಿ ಕುಡಿಸಬೇಕು.

Comments (0)
Add Comment